Wednesday, May 14, 2025
Homeಟಾಪ್ ನ್ಯೂಸ್SPEAKER'S SUMMIT : ಬೆಂಗಳೂರಿನಲ್ಲಿ ಸ್ಪೀಕರ್‌ಗಳ ಸಮಾವೇಶ: ಕರ್ನಾಟಕದಲ್ಲಿ ಪ್ರಥಮ ಪ್ರಯತ್ನ

SPEAKER’S SUMMIT : ಬೆಂಗಳೂರಿನಲ್ಲಿ ಸ್ಪೀಕರ್‌ಗಳ ಸಮಾವೇಶ: ಕರ್ನಾಟಕದಲ್ಲಿ ಪ್ರಥಮ ಪ್ರಯತ್ನ

ಮಂಗಳೂರು : ನಮ್ಮ ಕರ್ನಾಟಕ ಒಂದು ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಕಾಮನ್ ವೆಲ್ತ್ ಸಂಸದೀಯ ಸಂಘದ ಅಖಿಲ‌ ಭಾರತ ಮಟ್ಟದ ಸ್ಪೀಕರ್​ಗಳ ಸಮಾವೇಶವನ್ನು ಸೆಪ್ಟೆಂಬರ್ 8ರಿಂದ 10ರವರೆಗೆ ಬೆಂಗಳೂರಿನಲ್ಲಿ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕಕ್ಕೆ ಈ ಸಮ್ಮೇಳನದ ಆತಿಥ್ಯ ವಹಿಸುವ ಅವಕಾಶ ದೊರೆತಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.‌ ಖಾದರ್ ಹೇಳಿದ್ದಾರೆ.

ಮಂಗಳೂರಲ್ಲಿ ಮಾತಾಡಿದ ಅವರು, ಬೆಂಗಳೂರಿನಲ್ಲಿ ಒಂದೆರಡು ಸ್ಥಳಗಳನ್ನು ಗುರುತಿಸಲಾಗಿದ್ದು, ಆ ಸ್ಥಳಗಳ ಪೈಕಿ ಒಂದನ್ನು ಆಯ್ಕೆ ಮಾಡಲಾಗುವುದು. ಸೆಪ್ಟೆಂಬರ್ 11ರಂದು, ಸಮ್ಮೇಳನದಲ್ಲಿ ಭಾಗವಹಿಸುವ ಸ್ಪೀಕರ್​ಗಳಿಗೆ ರಾಜ್ಯ ಪ್ರವಾಸಕ್ಕೆ ಕರೆದೊಯ್ಯಲು ಚಿಂತನೆ ನಡೆದಿದೆ. ಮೈಸೂರು, ಮಂಗಳೂರು ಹಾಗೂ ಬೇಲೂರು-ಹಳೆಬೀಡು ಪೈಕಿ ಯಾವುದಾದರೂ ಒಂದು ಸ್ಥಳವನ್ನು ತೋರಿಸುತ್ತೇವೆ ಎಂದಿದ್ದಾರೆ.

ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ವಿಧಾನಸಭೆ ಸ್ಪೀಕರ್ ಮತ್ತು ವಿಧಾನ ಪರಿಷತ್ ಸಭಾಪತಿ‌ ನೇತೃತದಲ್ಲಿ ಈ ಸಮ್ಮೇಳನ ನಡೆಯಲಿದೆ. ದೇಶದ ಎಲ್ಲ ರಾಜ್ಯಗಳ ಸ್ಪೀಕರ್ ಹಾಗೂ ಉಪ ಸ್ಪೀಕರ್​ಗಳು, ವಿಧಾನ ಪರಿಷತ್​ನ ಸಭಾಪತಿ, ಉಪ ಸಭಾಪತಿಗಳು, ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಪ್ರಜಾಪ್ರಭುತ್ವ ಬಲಿಷ್ಠ ಗೊಳಿಸುವುದು, ಪ್ರಜಾಪ್ರಭುತ್ವದಲ್ಲಿ ಸ್ಪೀಕರ್​ಗಳ ಪಾತ್ರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗುತ್ತದೆ. ಸೆಪ್ಟೆಂಬರ್ 8 ರಂದು ಸಂಜೆ 6.30ಕ್ಕೆ ವಿಧಾನಸೌಧದಲ್ಲಿ ಲೋಕಸಭೆ ಸ್ಪೀಕರ್ ಉಪಸ್ಥಿತಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನಕ್ಕೆ ಚಾಲನೆ ನೀಡುತ್ತಾರೆ. ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮಗಳಿಗೆ ಶಾಸಕರನ್ನು ಆಹ್ವಾನಿಸಲಾಗುವುದು ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ

ಹೆಚ್ಚಿನ ಸುದ್ದಿ

error: Content is protected !!