ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಿಜೆಪಿಯು ಹನುಮಂತನಂತೆ ಪಣತೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿಯ 44ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮೋದಿ ಮಾತನಾಡುತ್ತಿದ್ದರು.
ಭಾರತವನ್ನು ಭ್ರಷ್ಟಾಚಾರದಿಂದ, ವಂಶಪಾರಂಪರ್ಯದಿಂದ ಮತ್ತು ಕಾನೂನು ಸುವ್ಯವಸ್ಥೆಯ ಸಮಸ್ಯೆಗಳಿಂದ ಮುಕ್ತಗೊಳಿಸಲು ಬಿಜೆಪಿಯು ಪಣತೊಟ್ಟಿದೆ ಎಂದವರು ಹೇಳಿದರು.
ಕೆಲವೊಂದು ಸಂದರ್ಭದಲ್ಲಿ ನಾವು ಹನುಮನಂತೆ ಕಠಿಣವಾಗಬೇಕು. ಯಾವತ್ತಿದ್ದರೂ ದೇಶವೇ ಮೊದಲು ಎನ್ನುವಂತಹ ನೀತಿ ನಮ್ಮದು. ನಾವು ಭಾರತಮಾತೆ, ಸಂವಿಧಾನ ಮತ್ತು ಭಾರತಮಾತೆಯ ಕೋಟ್ಯಾಂತರ ಪ್ರಜೆಗಳಿಗೆ ಬದ್ಧರು. ಮುಂದಿನ 25 ವರ್ಷಗಳವರೆಗೆ ನಮ್ಮ ಗುರಿ ಇರಬೇಕು. ಪಂಚಾಯತ್ ನಿಂದ ಹಿಡಿದು ಸಂಸತ್ತಿನವರೆಗೆ ನಮ್ಮ ಕಾರ್ಯಕರ್ತನ್ನು ತಯಾರುಗೊಳಿಸಬೇಕು ಎಂದರು.
ವಿರೋಧ ಪಕ್ಷಗಳು ಎಷ್ಟು ಹದಗೆಟ್ಟಿದೆ ಎಂದರೆ ನನ್ನ ಸಮಾಧಿ ಅಗೆಯುತ್ತಿರುವುದಾಗಿ ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ ತುಳಿತಕ್ಕೊಳಗಾದವರು, ದಲಿತರು ಮತ್ತು ಆದಿವಾಸಿಗಳು ಬಿಜೆಪಿಯ ಜೊತೆಗಿದ್ದಾರೆ ಎನ್ನುವುದು ಅವರಿಗೆ ತಿಳಿದಿಲ್ಲ. ಬಿಜೆಪಿ ಜನಿಸಿದ್ದು ಪ್ರಜಾಪ್ರಭುತ್ವದ ಕಲ್ಪನೆಯ ಜೊತೆಗೆ ಹಾಗೂ ಬಿಜೆಪಿಯು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎಂದಿಗೂ ಉಳಿಸಿಕೊಳ್ಳಲಿದೆ ಎಂದು ಮೋದಿ ಹೇಳಿದರು.