ಬೆಂಗಳೂರು : ಸಣ್ಣ ವರ್ತಕರು (Small vendors), ರಸ್ತೆ ಬದಿಯ ವ್ಯಾಪಾರಿಗಳು, ಬೇ ಕರಿ,ಹಾಲು ಅಂಗಡಿ ಮತ್ತು ಪಾನ್ ಶಾಪ್ ಗಳಿಗೆ ತೆರಿಗೆ ನೋಟಿಸ್ (GST Notice) ನೀಡಿರುವುದನ್ನು ವಿರೋಧಿಸಿ ಬುಧವಾರ ಮತ್ತು ಗುರುವಾರ ರಾಜ್ಯಾದ್ಯಂತ ಮುಷ್ಕರ (protest) ನಡೆಸಲಾಗುತ್ತಿದೆ. ವರ್ತಕರು ಕೆಲವೆಡೆ ತಮ್ಮ ಅಂಗಡಿಯನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರೆ ಇನ್ನೂ ಕೆಲವರು ತಮ್ಮ ಕೈಗೆ ಕಪ್ಪು ಪಟ್ಟಿ ಧರಿಸಿ ಸರ್ಕಾರ ಕ್ರಮಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ವ್ಯಾಪಾರಿಗಳಿಗೆ GST ಆಘಾತ.. 2 ದಿನ ಸಣ್ಣ ವರ್ತಕರು ಬಂದ್ಗೆ ಕರೆ, ಏನೇನು ಸಿಗಲ್ಲ?
ಹಲವೆಡೆ ಬೇಕರಿಗಳನ್ನು ಇಂದಿನಿಂದಲೇ ಹಾಲು, ಮೊಸರು, ಕಾಫಿ, ಚಹಾ ಮತ್ತಿತರ ವಸ್ತುಗಳನ್ನು ಮಾರುತ್ತಿಲ್ಲ. ನಾಳೆಯಂತೂ (ಜು. 25) ಸಿಗರೇಟು ಮತ್ತು ಗುಟ್ಕಾ ಪ್ರಿಯರಿಗೂ ಸಹ ಪಡಿಪಾಟಲು ಎದುರಾಗುವ ಸಾಧ್ಯತೆಗಳಿವೆ.
ಹಾಲು ಮಾರಾಟಕ್ಕೆ ಇಂದು ವರ್ತಕರು ವಿರೋಧ ಸೂಚಿಸಿರುವ ಹಿನ್ನೆಲೆಯಲ್ಲಿ ಹಲವೆಡೆ ಹಾಲು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಂಭವವಿದೆ. ನಾಳೆಯಿಂದ ಎಲ್ಲಾ ಸಣ್ಣ ವರ್ತರಕು ಬೆಂಗಳೂರಿನ ಸ್ವತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಕಾಲಕ್ಕೆ ಪ್ರತಿಭಟನೆ ಕೈಗೊಳ್ಳಲಿದ್ದಾರೆ.
ತೆರಿಗೆ ಯೋಜನೆಯಡಿಯಲ್ಲಿ ಶೇ 1 ರಷ್ಟು ತೆರಿಗೆ ಮಾತ್ರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಾವು ಯುಪಿಐ ಬಳಕೆ ನಿಲ್ಲಿಸಿ ಹಣದಲ್ಲೇ ವಹಿವಾಟು ನಡೆಸಬೇಕಾಗುತ್ತದೆ ಎಂದು ರಾಜ್ಯದ ಬೇಕರಿ ಮತ್ತು ಕಾಂಡಿಮೆಂಟ್ಸ್ ವ್ಯಾಪಾರಿಗಳ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ವ್ಯಾಪಾರಿಗಳ ಈ ನಿರ್ಣಯ ಆನ್ಲೈನ್ ವಹಿವಾಟಿನ ಮೇಲೂ ಪರಿಣಾಮ ಬೀರಿದ್ದು ,ಇದೀಗ ಪರೋಕ್ಷವಾಗಿ ಗ್ರಾಹಕರ ಮೇಲೂ ಪರಿಣಾಮ ಬೀರಲಾರಂಭಿಸಿದೆ. ಗೂಗಲ್ ಪೇ, ಪೇಟಿಎಂ, ಫೋನ್ ಪೇ ಬಳಕೆ ಬೇಡ. ಹಣವನ್ನೇ ಕೊಡಿ ಎಂದು ಅಂಗಡಿಗಳ ಮಾಲಿಕರು ಕಿರಿಕಿರಿ ಮಾಡಲಾರಂಭಿಸಿದ್ದಾರೆ.
ಇದೇ ವೇಳೆ ಜಿಎಸ್ಟಿ ವಿರುದ್ದ ವರ್ತಕರ ಹೋರಾಟದಲ್ಲಿ ಸಂಘಟನೆಗಳ ನಡುವೆ ಭಿನ್ನಮತವೂ ಸಹ ಮೂಡಿದೆ. ಒಕ್ಕೂಟದ ಅಧ್ಯಕ್ಷ ಡಿ.ಬಿ ಪ್ರತಾಪ್ ಶೆಟ್ಟಿ ನಾವು ಮುಷ್ಕರದಲ್ಲಿ ಪಾಲ್ಗೊಳ್ಳುವುದಿಲ್ಲ. ಕೇವಲ ಜು. 25 ರಂದು ನಡೆಯುವ ಪ್ರತಿಭಟನೆಯಲ್ಲಿ ಮಾತ್ರ ಪಾಲ್ಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.