ಬೆಂಗಳೂರು : ನಗರದಲ್ಲಿ ಚಲಿಸುತ್ತಿರುವ ಕಾರಿನಲ್ಲೇ ಕಾಮುಕರು ಯುವತಿಯೋರ್ವಳ ಮೇಲೆ ಅತ್ಯಾಚಾರ ಗೈದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮ್ಯಯ್ಯ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿದ್ಧಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.
ಕಗ್ಗಲೀಪುರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದು ಒಂದು ವಾರವೂ ಕಳೆದಿಲ್ಲ. ಕೋರಮಂಗಲದಲ್ಲಿ ನಡೆದ ಅತ್ಯಾಚರ ಪ್ರಕರಣ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜೀವಂತವಾಗಿದೆ ಎಂಬ ನಂಬಿಕೆಯನ್ನೇ ಜನ ಕಳೆದುಕೊಳ್ಳುವಂತೆ ಮಾಡಿದೆ ಎಂದಿರುವ ಸಿದ್ದರಾಮಯ್ಯ, ದುಷ್ಟರನ್ನು ಮತ್ತು ಸಮಾಜಘಾತುಕರನ್ನು ಹಿಡಿದು ಸದೆಬಡಿಯಬೇಕಿದ್ದ ಬಿಜೆಪಿ ಸರ್ಕಾರ ಬದಲಿಗೆ ರೌಡಿಶೀಟರ್ಗಳು ಮತ್ತು ಕೊಲೆಗಡುಕರನ್ನು ಸನ್ಮಾನಿಸಿ ಪಕ್ಷಕ್ಕೆ ಸೇರಿಸಿಕೊಂಡಿದೆ. ಅದರ ಫಲವನ್ನು ಜನಸಾಮಾನ್ಯರು ಉಣ್ಣಬೇಕಿದೆ ಎಂದು ಕಿಡಿಕಾರಿದ್ದಾರೆ.
ಕಾನೂನು ಸುವ್ಯವಸ್ಥೆಯ ಬಗ್ಗೆ ಸದನದಲ್ಲಿ ಪ್ರಶ್ನಿಸಿದಾಗ ಮೈಮೇಲೆ ಕಂಬಳಿಹುಳ ಬಿದ್ದವರಂತೆ ಕುಣಿದಾಡಿ, ಎಗರಾಡಿದ ಗೃಹಸಚಿವ ಆರಗ ಜ್ಞಾನೇಂದ್ರರ ಅಸಮರ್ಥತೆಯೇ ಈ ಎಲ್ಲಾ ದೌರ್ಜನ್ಯಗಳಿಗೂ ಕಾರಣ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆದಿದ್ದು, ಅದಕ್ಷತೆಯಿಂದ ಕಾರ್ಯನಿರ್ವಹಿಸುವ ಬದಲು ಕೂಡಲೇ ರಾಜೀನಾಮೆ ನೀಡಬೇಕೆಂದ ಆಗ್ರಹಿಸಿದ್ದಾರೆ.