ಬೆಂಗಳೂರು: ರಾಜ್ಯ (Karnataka) ಕಾಂಗ್ರೆಸ್ನಲ್ಲಿ (Congress) ಬಹುದೊಡ್ಡ ನಾಯಕತ್ವ ಬದಲಾವಣೆಯ ಪರ್ವ ಆರಂಭವಾಗಿ, ಡಿ.ಕೆ. ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡಿಕೊಳ್ಳಲು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಕಾಂಗ್ರೆಸ್ ಹೈಕಮಾಂಡ್ ದೊಡ್ಡ ಹುದ್ದೆ ನೀಡಿದೆ.
ಕಾಂಗ್ರೆಸ್ ಪಕ್ಷದ ಅತ್ಯುನ್ನತ ಮತ್ತು ಶಕ್ತಿಶಾಲಿ ನಿರ್ಧಾರ ಕೈಗೊಳ್ಳುವ ಸಮಿತಿಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC – Congress Working Committee) ಪೂರ್ಣ ಪ್ರಮಾಣದ ಸದಸ್ಯರನ್ನಾಗಿ ಸಿದ್ದರಾಮಯ್ಯ ಅವರನ್ನು ನೇಮಕ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿಕೃತ ಆದೇಶ ಹೊರಬಿದ್ದಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣದ ಮುಂಚೂಣಿಗೆ ತರುವ ಹೈಕಮಾಂಡ್ ತಂತ್ರಗಾರಿಕೆ ಇದರ ಹಿಂದೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ರಾಜ್ಯದಿಂದ ದೆಹಲಿಗೆ ಬಡ್ತಿ!
ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಒಪ್ಪಿದ ಬೆನ್ನಲ್ಲೇ ಹೈಕಮಾಂಡ್ ಅವರಿಗೆ ನೀಡಿದ್ದ ಭರವಸೆಯಂತೆ ಈ ಮಹತ್ವದ ಸ್ಥಾನಮಾನವನ್ನು ಕಲ್ಪಿಸಿದೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ನೀತಿ-ನಿಯಮಗಳು, ದೇಶದ ಪ್ರಮುಖ ರಾಜಕೀಯ ನಿರ್ಧಾರಗಳು ಹಾಗೂ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ‘ಸಿಡಬ್ಲ್ಯೂಸಿ’ ಸಮಿತಿಯ ಪಾತ್ರ ಅತ್ಯಂತ ನಿರ್ಣಾಯಕವಾಗಿರುತ್ತದೆ.
ಇದೀಗ ಸಿದ್ದರಾಮಯ್ಯ ಅವರಿಗೆ ಈ ರಾಷ್ಟ್ರೀಯ ಸಮಿತಿಯಲ್ಲಿ ಸ್ಥಾನ ನೀಡಿರುವುದರಿಂದ, ರಾಜ್ಯ ರಾಜಕಾರಣದ ಜೊತೆಗೆ ಮುಂಬರುವ ದಿನಗಳಲ್ಲಿ ದೇಶದಾದ್ಯಂತ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಮತ್ತು ರಾಷ್ಟ್ರ ಮಟ್ಟದ ನಿರ್ಧಾರಗಳಲ್ಲಿ ಸಿದ್ದರಾಮಯ್ಯ ಅವರ ಅನುಭವವನ್ನು ಬಳಸಿಕೊಳ್ಳಲು ಗಾಂಧಿ ಕುಟುಂಬ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಮುಂದಾಗಿದ್ದಾರೆ.
ರಾಜ್ಯದಲ್ಲಿ ಜೂನ್ 3 ರಂದು ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಇಂತಹ ಹೈ-ವೋಲ್ಟೇಜ್ ರಾಜಕೀಯ ವಿದ್ಯಮಾನಗಳ ನಡುವೆಯೇ ಸಿದ್ದರಾಮಯ್ಯ ಅವರಿಗೆ ಸಿಡಬ್ಲ್ಯೂಸಿ ಮೆಂಬರ್ ಪಟ್ಟ ಸಿಕ್ಕಿದೆ. ಇದು ಸಿದ್ದರಾಮಯ್ಯರಿಗೆ ಬಡ್ತಿಯೋ ಅಥವಾ ರಾಜ್ಯ ರಾಜಕಾರಣದಿಮದ ದೂರವಿಡುವ ತಂತ್ರವೋ ಎಂಬ ಪ್ರಶ್ನೆ ಎದ್ದಿದೆ
