ಇಂದು ಶ್ರೀರಾಮನವಮಿ ಹಬ್ಬವನ್ನು ನಾಡಿನೆಲ್ಲೆಡೆ ಭರ್ಜರಿಯಾಗಿಯೇ ಆಚರಿಸಲಾಗುತ್ತಿದೆ. ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಜನ್ಮದಿನವನ್ನು ಚೈತ್ರ ಮಾಸದ ಒಂಬತ್ತನೇ ದಿನ ಆಚರಿಸಲಾಗುತ್ತಿದ್ದು, ಇಂದು ದೇಶಾದ್ಯಂತ ಶ್ರೀರಾಮ ಮತ್ತು ಹನುಮಂತನ ಮಂದಿರಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ.
ಚೈತ್ರ ಮಾಸವೆಂದರೆ ಬೇಸಿಗೆಯ ಸುಡುದಿನಗಳ ಕಾಲ. ಹೀಗಾಗಿ ಶ್ರೀರಾಮನವಮಿಯ ದಿನದಂದು ಪ್ರತಿ ದೇಗುಲಗಳಲ್ಲೂ ಅರವಂಟಿಗೆಗಳನ್ನು ಸ್ಥಾಪಿಸಿ ಪಾನಕ ಮತ್ತು ಮಜ್ಜಿಗೆ, ಪನಿವಾರವನ್ನು ವಿತರಿಸುವುದು ಹಿಂದಿನಿಂದಲೂ ನಡೆದುಬಂದಿದೆ. ಇಂದು ರಾಜ್ಯಾದ್ಯಂತ ದೇಗುಲಗಳಲ್ಲಿ ಮಾತ್ರವಲ್ಲದೇ ಸ್ಥಳೀಯ ಮಟ್ಟದಲ್ಲೂ ಸಹ ಹಲವರು ಪಾನಕ ವಿನಿಯೋಗ ನಡೆಸುವುದು ಸಾಮಾನ್ಯವಾಗಿ ಕಾಣಬಹುದಾದ ದೃಶ್ಯವಾಗಿದೆ.
ಬೇಸಿಗೆಯ ಶಾಖದ ದಿನಗಳಲ್ಲಿ ಘನ ಆಹಾರಕ್ಕಿಂತ ದ್ರವ ಆಹಾರ ಹೆಚ್ಚು ಆರೋಗ್ಯಕರವೆಂಬ ಸಾಂಪ್ರದಾಯಿಕ ನಂಬಿಕೆಯೂ ಸಹ ಈ ಆಚರಣೆಯ ಹಿಂದಿರುವುದು ವಿಶೇಷವಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಪ್ರತಿ ಶ್ರೀರಾಮನವಮಿಯ ಸಮಯದಲ್ಲಿ ಸಂಗೀತೋತ್ಸವ ನಡೆಸುವುದು ಹಲವು ದಶಕಗಳಿಂದ ನಡೆದು ಬಂದಿದ್ದು, ದಕ್ಷಿಣ ಭಾರತದ ಸಂಗೀತ ದಿಗ್ಗಜರನ್ನು ಅತಿಥಿಗಳಾಗಿ ಕರೆಸಲಾಗುತ್ತದೆ.