ಒಳಮೀಸಲಾತಿ ಜಾರಿ ವಿರುದ್ಧ ಬಂಜಾರ ಸಮುದಾಯ ನಡೆಸಿದ ಪ್ರತಿಭಟನೆ ವೇಳೆ ಬಿಎಸ್ ಯಡಿಯೂರಪ್ಪರ ನಿವಾಸಕ್ಕೆ ಕಲ್ಲು ತೂರಾಟ ನಡೆದಿರುವುದರ ಹಿಂದೆ ಬಿಎಲ್ ಸಂತೋಷ್ ಬಣವಿರಬಹುದು ಎಂದು ಕಾಂಗ್ರೆಸ್ ಪರೋಕ್ಷವಾಗಿ ಆರೋಪಿಸಿದೆ.
ಬಿಎಸ್ವೈ ಮನೆ ದಾಳಿಯಲ್ಲಿ ‘ಸಂತೋಷ ಕೂಟ’ದ ಕೈವಾಡ ಇದೆ ಎಂದು ಹೇಳಿದ ಕಾಂಗ್ರೆಸ್, ʼಬಿಎಸ್ವೈ ಅವರು ಮುಖ್ಯಮಂತ್ರಿಯಲ್ಲ, ಸರ್ಕಾರದ ನಿರ್ಧಾರಗಳಲ್ಲಿ ಅವರ ಪಾತ್ರವಿಲ್ಲ, ಆದ್ರೂ ಸರ್ಕಾರದ ಅವಾಂತರಕ್ಕೆ ಅವರ ಮನೆ ಮೇಲೆ ದಾಳಿ ಆಗಿದ್ದೇಕೆ? ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದ್ದೇಕೆ ಎನ್ನುವುದೇ ಯಕ್ಷಪ್ರಶ್ನೆ. ಅವರ ಮನೆ ಮೇಲಿನ ದಾಳಿಯ ಹಿಂದೆ ಬಿಜೆಪಿಯ ‘ಸಂತೋಷ ಕೂಟ’ದ ಕೈವಾಡ ಇರುವುದು ನಿಶ್ಚಿತʼ ಎಂದು ಟ್ವೀಟ್ ಮಾಡಿದೆ.
ಕಾನೂನು ಸುವ್ಯವಸ್ಥೆ ಉಲ್ಲಂಘನೆಯ ಪ್ರಕರಣಗಳು, ಗಲಭೆ, ಘರ್ಷಣೆಗಳೆಲ್ಲದರ ಬೀಜ ಬಿತ್ತುವುದು ಗೃಹಸಚಿವರ ತವರು ಜಿಲ್ಲೆ ಶಿವಮೊಗ್ಗದಲ್ಲೇ ಏಕೆ? ಎಂದು ಪ್ರಶ್ನಿಸಿದ ಕಾಂಗ್ರೆಸ್, “ತನ್ನ ತವರಿನಲ್ಲಿ, ಅದರಲ್ಲೂ ಮಾಜಿ ಸಿಎಂ ಮನೆ ಬಳಿ ಕಾನೂನು ಸುವ್ಯವಸ್ಥೆ ಕಾಪಾಡಲಾಗದ ಆರಗ ಜ್ಞಾನೇಂದ್ರ ಅವರದ್ದು ಹೊಣೆಗೇಡಿತನವೋ ಅಥವಾ “ಸಂತೋಷ ಕೂಟ”ವನ್ನು ಮೆಚ್ಚಿಸುವ ಷಡ್ಯಂತ್ರವೋ? ಎಂದು ಕೇಳಿದೆ.
‘ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಿರುವುದರ ಹಿಂದೆ ಬಿಜೆಪಿಯದೇ ಕೈವಾಡ ಇರಬಹುದುʼ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ಹೇಳಿದ್ದಾರೆ.