ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ನಟನೆಯ (Sandalwood) ಬಹುನಿರೀಕ್ಷಿತ ‘ಕೆಡಿ’ ಸಿನಿಮಾದ (KD Film) ಮತ್ತೊಂದು ಹಾಡು ರಿಲೀಸ್ ಆಗಿದೆ.
‘ನುಗ್ಗಿ ಹೊಡಿ’ ಹಾಡು ಬಿಡುಗಡೆ
ಈಗಾಗಲೇ ಒಂದು ಹಾಡು ಬಿಡುಗಡೆ ಆಗಿ ಬಹಳ ವಿವಾದ ಹುಟ್ಟುಹಾಕಿತ್ತು. ಇತ್ತೀಚೆಗಷ್ಟೇ ವಿವಾದ ಸುಖಾಂತ್ಯ ಆಗಿದೆ. ಹೀಗಿರುವಾಗ, ‘ನುಗ್ಗಿ ಹೊಡಿ’ ಎನ್ನುವ ಭರ್ಜರಿ ಹಾಡು ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಖ್ಯಾತ ಗಾಯಕ ಶಂಕರ್ ಮಹಾದೇವನ್ ಅವರ ಪವರ್ಫುಲ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸ್ವತಃ ನಿರ್ದೇಶಕ ಜೋಗಿ ಪ್ರೇಮ್ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ರೌಡಿಸಂ ಹಿನ್ನೆಲೆಯ ಸಾಲುಗಳು ಅಭಿಮಾನಿಗಳಲ್ಲಿ ಜೋಶ್ ತುಂಬುತ್ತಿವೆ.
ಲಿರಿಕಲ್ ಹಾಡು ರಿಲೀಸ್
ಸದ್ಯಕ್ಕೆ ಇನ್ನು ಈ ಹಾಡಿನ ವಿಡಿಯೋ ರಿಲೀಸ್ ಆಗಿಲ್ಲ. ಕೇವಲ ಲಿರಿಕಲ್ ವಿಡಿಯೋ ಹಾಡು ರಿಲೀಸ್ ಆಗಿದೆ. ರಾಮನ ಹಿಂದೆ ಹನುಮನಿದ್ದ ಕಾರಣಕ್ಕೇ ಆತ ಲಂಕೆ ಗೆದ್ದ” ಎಂಬ ಸಾಲುಗಳೊಂದಿಗೆ ಸಾಗುವ ಈ ಗೀತೆಯಲ್ಲಿ, ರೌಡಿಸಂ ಪ್ರಪಂಚದ ಕಟು ಸತ್ಯಗಳನ್ನು ವಿವರಿಸಲಾಗಿದೆ. ಗೆದ್ದರೆ ಸಿಂಹಾಸನ, ಸೋತರೆ ವೀರ ಮರಣ” ಎನ್ನುವ ಮಾತುಗಳು ಸಿನಿಮಾದ ಗಾಂಭೀರ್ಯವನ್ನು ಹೆಚ್ಚಿಸಿವೆ. ಮಚ್ಚು ಹಿಡಿದವರ ಲೋಕದಲ್ಲಿ ಗುರು ಅಥವಾ ಕರುಣೆಗೆ ಜಾಗವಿಲ್ಲ ಎನ್ನುವ ಸಂದೇಶವೂ ಈ ಹಾಡಿನಲ್ಲಿದೆ.
ಕೆಡಿ ಸಿನಿಮಾ ಹಾಡಿನ ವಿವಾದಕ್ಕೆ ವಿರಾಮ, ಗ್ರೀನ್ ಸಿಗ್ನಲ್ ಕೊಟ್ಟ ಮಹಿಳಾ ಆಯೋಗ
‘ಕೆಡಿ’ ಚಿತ್ರದ ‘ಸರ್ಸೆ ಸೆರಗ ಸರ್ಸೆ’ ಹಾಡು ಬಿಡುಗಡೆಯಾದ ದಿನದಿಂದಲೂ ಅದರ ಸಾಹಿತ್ಯದ ವಿಚಾರವಾಗಿ ತೀವ್ರ ಟೀಕೆಗೆ ಗುರಿಯಾಗಿತ್ತು. ಹಾಡಿನಲ್ಲಿ ಬಳಸಲಾದ ಕೆಲವು ಪದಗಳು ಮಹಿಳೆಯರ ಘನತೆಗೆ ಧಕ್ಕೆ ತರುವಂತಿವೆ ಎಂದು ಆರೋಪಿಸಿ ಹಲವು ಸಂಘಟನೆಗಳು ದೂರು ದಾಖಲಿಸಿದ್ದವು. ಈ ವಿಷಯ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾದ ಬೆನ್ನಲ್ಲೇ, ರಾಷ್ಟ್ರೀಯ ಮಹಿಳಾ ಆಯೋಗವು ನಿರ್ದೇಶಕ ಪ್ರೇಮ್ ಹಾಗೂ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಈ ಹಿಂದೆ ಕೆಲಸದ ಒತ್ತಡದಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಪ್ರೇಮ್, ತಮ್ಮ ಪರವಾಗಿ ವಕೀಲರನ್ನು ಕಳುಹಿಸಿದ್ದರು. ಆದರೆ ಆಯೋಗವು ಏಪ್ರಿಲ್ 6ರಂದು ಖುದ್ದಾಗಿ ಹಾಜರಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಅದರಂತೆ ನಿನ್ನೆ ನಿರ್ದೇಶಕ ಪ್ರೇಮ್ ಮತ್ತು ಕಾರ್ಯಕಾರಿ ನಿರ್ಮಾಪಕ ಸುಪ್ರೀತ್ ವಕೀಲರ ತಂಡದೊಂದಿಗೆ ದೆಹಲಿಗೆ ತೆರಳಿ ಆಯೋಗದ ಮುಂದೆ ಹಾಜರಾದರು.
ಹಾಡಿನ ಸಾಹಿತ್ಯದ ಉದ್ದೇಶ, ಪದಗಳ ಬಳಕೆ ಮತ್ತು ಅದರ ರಚನೆಯ ಬಗ್ಗೆ ಆಯೋಗದ ಅಧ್ಯಕ್ಷರಿಗೆ ಸುದೀರ್ಘ ವಿವರಣೆ ನೀಡಿದರು. ಚಿತ್ರತಂಡದ ಸ್ಪಷ್ಟನೆಯನ್ನು ಆಲಿಸಿದ ಮಹಿಳಾ ಆಯೋಗವು ಕೊನೆಗೂ ಹಾಡಿಗೆ ಅನುಮತಿ ನೀಡಿದೆ.
ಇದನ್ನೂ ಓದಿ: ಚಂದನ್ ಶೆಟ್ಟಿಯ ‘ಎಲ್ರ ಕಾಲೆಳೆಯುತ್ತೆ ಕಾಲ’ ಟ್ರೈಲರ್ ರಿಲೀಸ್-VIDEO