ತುಮಕೂರು : ತುಮಕೂರು (Tumkuru) ಹಾಗೂ ಬೀದರ್ (Bidar) ಜಿಲ್ಲೆಯಲ್ಲಿ ಪ್ರತ್ಯೇಕ ಅಪಘಾತ (road mishap) ಸಂಭವಿಸಿದ್ದು, ಐವರು ದಾರುಣವಾಗಿ ಮೃತಪಟ್ಟಿದ್ದಾರೆ.
ತುಮಕೂರು ಅಪಘಾತ
ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ತುಮಕೂರಿನ ತಾಲೂಕಿನ ಬಾಣವಾರ ಬಳಿ ನಡೆದಿದೆ.
ಮೃತರನ್ನು ತುಮಕೂರು ಜಯನಗರ ಮೂಲದ ಮುರುಳಿ (45), ಸುರೇಶ್ (55) ಎಂದು ಗುರುತಿಸಲಾಗಿದೆ. ಅದೇ ರೀತಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತುಮಕೂರು-ಕುಣಿಗಲ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ.
ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ತೆರಳುತ್ತಿದ್ದ ಕ್ವಾಲಿಸ್ ಮತ್ತು ಮುಂದೆ ಬರುತ್ತಿದ್ದ ಎಸ್ಟೀಮ್ ಹಾಗೂ ಬೋಲೆನೋ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ವೇಳೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಆದಿಚುಂಚನಗಿರಿ ಮಠಕ್ಕೆ ಹೋಗಿ ವಾಪಸ್ ಬರುತಿದ್ದಾಗ ಈ ಘಟನೆ ನಡೆದಿದೆ.
ಘಟನೆಯಲ್ಲಿ ತುಮಕೂರು ಇನ್ಸ್ಪೆಕ್ಟರ್ ರಾಮಕೃಷ್ಣಗೆ ಗಾಯವಾಗಿದೆ. ಗಾಯಗೊಂಡ ರಾಮಕೃಷ್ಣಪ್ಪರನ್ನ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಇನ್ನೂಳಿದ ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಹೆಬ್ಬೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬೀದರ್ ಅಪಘಾತ:
ರಸ್ತೆ ಪಕ್ಕದ ಬ್ರಿಡ್ಜ್ಗೆ ಬೈಕ್ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಬೀದರ್ (Bidar) ಹುಮನಾಬಾದ್ ತಾಲೂಕಿನ ಹಳ್ಳಿಖೇಡ-ಬಿ ಬಳಿಯ ನಾಗಣ್ಣ ಕ್ರಾಸ್ ಹತ್ತಿರ ನಡೆದಿದೆ.
ಮೃತರನ್ನು ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ವೆಂಕಟ್ ಕರಟ್ಮಲ್ (40), ಶಿಲ್ಪಾ (35), ರಕ್ಷಿತಾ (12) ಎಂದು ಗುರುತಿಸಲಾಗಿದೆ. ದಿಗಂಬರ್ (15) ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಅಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ. ಬೀದರ್ಗೆ ಹೋಗಿ ವಾಪಸ್ ರಾಜೇಶ್ವರ ಗ್ರಾಮಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ.
ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ ನಾಲ್ವರು ಒಂದೇ ಬೈಕ್ನಲ್ಲಿ ತೆರಳುತ್ತಿದ್ದರು. ಬೀದರ್ನಲ್ಲಿರುವ ಸೋದರ ಅಳಿಯನ ಮಗಳನ್ನ ಮಾತನಾಡಿಸೋಕೆ ಬಂದಿದ್ದರು. ವಾಪಸ್ ಆಗುವಾಗ ಸೇತುವೆಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಓಲಾ, ಉಬರ್ಗೆ ಭಾರತ್ ಟ್ಯಾಕ್ಸಿ ಶಾಕ್..! ಈ ಮೂರರಲ್ಲಿ ಯಾವುದು ಅಗ್ಗ?