ಕೋಲ್ಕತ್ತಾ: ಆರ್ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಸಂಜಯ್ ರಾಯ್ಗೆ ಪಶ್ಚಿಮ ಬಂಗಾಳದ ಸೀಲ್ದಾ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಅಪರಾಧಿಗೆ ಮರಣದಂಡನೆ ನೀಡಬೇಕು ಎಂದು ನ್ಯಾಯಾಲಯವನ್ನು ಮನವಿ ಮಾಡಿತ್ತು. ಆದ್ರೆ ನ್ಯಾಯಾಧೀಶರು, ಇದು ಅಪರೂಪದ ಅಪರಾಧಗಳಲ್ಲಿ ಅಪರೂಪದ ಅಪರಾಧ ಅಲ್ಲ, ಹೀಗಾಗಿ ಮರಣದಂಡನೆ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ವಾದ ಮಾಡಿದ್ದ ಸಂಜಯ್ ರಾಯ್ ಪರ ವಕೀಲರು, ಇದೊಂದು ಅಪರೂಪದ ಪ್ರಕರಣವಾಗಿದ್ದರೂ ಸುಧಾರಣೆಗೆ ಅವಕಾಶವಿರಬೇಕು. ಅಪರಾಧಿ ಸುಧಾರಣೆ ಅಥವಾ ಪುನರ್ವಸತಿಗೆ ಏಕೆ ಯೋಗ್ಯನಲ್ಲ ಎಂಬುದನ್ನು ನ್ಯಾಯಾಲಯವು ತೋರಿಸಬೇಕು… ಪಬ್ಲಿಕ್ ಪ್ರಾಸಿಕ್ಯೂಟರ್ ಸಾಕ್ಷ್ಯವನ್ನು ಪ್ರಸ್ತುತಪಡಿಸಬೇಕು ಮತ್ತು ವ್ಯಕ್ತಿ ಏಕೆ ಯೋಗ್ಯನಲ್ಲ ಎಂಬ ಕಾರಣವನ್ನು ನೀಡಬೇಕು. ಸುಧಾರಣೆ ಮತ್ತು ಸಮಾಜದಿಂದ ಸಂಪೂರ್ಣವಾಗಿ ತೊಡೆದುಹಾಕಬೇಕು ಎಂದು ಸಂಜಯ್ ರಾಯ್ ಅವರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು.
ಕಳೆದ ವರ್ಷ ಆಗಸ್ಟ್ 9 ರಂದು ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯೊಳಗೆ ಸಂಜಯ್ ರಾಯ್ 31 ವರ್ಷದ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆ ಮಾಡಿದ್ದು, ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.
ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ವೈದ್ಯೆ ಶವವಾಗಿ ಪತ್ತೆಯಾಗಿದ್ದು, ಶವಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ದೃಢಪಟ್ಟಿತ್ತು.