ಕಲಬುರಗಿ: ಭಾರತದ ವಿದೇಶಾಂಗ ನೀತಿಯನ್ನು ಟ್ರಂಪ್ (Donald Trump) ಬಳಿ ಅಡವಿಟ್ಟಿದ್ದಾರೆ. ಅವರಿಗೆ ಯಾಕೆ ಹೆದರುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ನನ್ನ ಒಳ್ಳೆಯ ಸ್ನೇಹಿತ. ಅವರ ರಾಜಕೀಯ ಜೀವನ ಹಾಳು ಮಾಡಲು ಇಷ್ಟವಿಲ್ಲ ಎಂದು ಟ್ರಂಪ್ ಹೇಳುತ್ತಾರೆ, ಇದರ ಹಿಂದೆ ಏನಿದೆ ಎಂಬುದು ಸ್ಪಷ್ಟವಾಗಬೇಕು. ಅಸ್ತಿತ್ವದಲ್ಲೇ ಇಲ್ಲದ ಪ್ರಶಸ್ತಿ ಪಡೆದಂತೆ ತಾಮ್ರದ ತಟ್ಟೆಗೆ ಚಿನ್ನದ ಲೇಪ ಹಾಕಿಕೊಂಡು ಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಲೇವಡಿ ಮಾಡಿದರು.
ಕನ್ನಡಿಗರ ಬಗ್ಗೆ ಆತಂಕ ಬೇಡ
ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನ ಪರಿಸ್ಥಿತಿ ಕುರಿತು ಮಾತನಾಡಿದ ಖರ್ಗೆ, ದುಬೈನಲ್ಲಿ 28 ಜನ ಸಿಲುಕಿದ್ದಾರೆ. ವಿಮಾನ ಸಂಚಾರ ಸೀಮಿತವಾಗಿರುವ ಹಿನ್ನೆಲೆ ಕೇಂದ್ರ ಸರ್ಕಾರದ ಸೂಚನೆಗಳನ್ನು ಪಾಲಿಸಬೇಕು. ಜನರು ಆತಂಕಪಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಕನ್ನಡಿಗರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಜತೆಗೂ ನಿರಂತರ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.
ಖಮೇನಿ ಪ್ರತಿಭಟನೆ ವಿವಾದ
ಇರಾನ್ ಪರಮೋಚ್ಛ ನಾಯಕ ಖಮೇನಿ (Ali Khamenei) ಸಾವಿನ ಕುರಿತು ನಡೆದ ಪ್ರತಿಭಟನೆಯಲ್ಲಿ ಹ್ಯಾರಿಸ್ ಭಾಗಿಯಾಗಿದ್ದಕ್ಕೆ ಆರ್. ಅಶೋಕ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದರು. ಪ್ರಧಾನಿ ಸ್ವತಃ ಇರಾನ್ ನಮ್ಮ ಉತ್ತಮ ಸ್ನೇಹಿತ ರಾಷ್ಟ್ರ ಎಂದು ಹೇಳಿದ್ದರು. ನಾವು ಅವರೊಂದಿಗೆ ವ್ಯಾಪಾರ ನಡೆಸುತ್ತೇವೆ. ಶತ್ರು ರಾಷ್ಟ್ರಗಳ ಜೊತೆ ವ್ಯಾಪಾರ ಮಾಡುತ್ತೇವೆಯೇ? ಹಿಂದೆ ವಿದೇಶಿ ನಾಯಕರು ಸಾವನ್ನಪ್ಪಿದಾಗ ಭಾರತದಲ್ಲಿ ಅರ್ಧ ಧ್ವಜ ಹಾರಿಸಲಾಗಿದೆ. ನಾವು ಯಾವ ದೇಶದೊಂದಿಗೆ ಸಂಬಂಧ ಇಟ್ಟುಕೊಳ್ಳಬೇಕು ಎಂಬುದನ್ನು ಅಮೆರಿಕವನ್ನು ಕೇಳಿ ನಿರ್ಧರಿಸಬೇಕೇ? ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರದ ವಿದೇಶಾಂಗ ನಿಲುವಿನ ಕುರಿತು ಸ್ಪಷ್ಟತೆ ನೀಡಬೇಕು ಎಂದು ಖರ್ಗೆ ಆಗ್ರಹಿಸಿದರು.
ಇದನ್ನೂ ಓದಿ: ಈ ಟ್ರಂಪ್ಗೆ ಏನಾಯ್ತು? ಅಮೆರಿಕ ಅಧ್ಯಕ್ಷರಿಗೆ ಕಾಡುತ್ತಿದ್ಯಾ ಚರ್ಮರೋಗ?