ನವದೆಹಲಿ: ದೆಹಲಿ ಪೊಲೀಸರು ಸರಣಿ ಕಳ್ಳತನದ ಆರೋಪಿಯೊಬ್ಬನನ್ನು ಹರಸಾಹಸ ಪಟ್ಟು ಕೊನೆಗೂ ಬಂಧಿಸಿದ್ದಾರೆ. ಈ ಆಸಾಮಿ ಪೊಲೀಸರಿಂದ ತಪ್ಪಿಸಿಕೊಳ್ಳಲು ವಿಚಿತ್ರ ಮಾರ್ಗವೊಂದನ್ನು ಕಂಡುಕೊಂಡಿದ್ದ. ತನಗೆ ಬೇಕೆನಿಸಿದಾಗೆಲ್ಲಾ ಪ್ಯಾಂಟ್ನಲ್ಲೇ ಮಲವಿಸರ್ಜನೆ ಮಾಡಿಕೊಂಡು ದುರ್ವಾಸನೆ ಬೀರುವ ಮೂಲಕ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ.
ಹೌದು, ಕಳ್ಳ ದೀಪಕ್ ತಾನು ಪೊಲೀಸರ ಕೈಗೆ ಸಿಕ್ಕಿ ಬೀಳುವ ಅಪಾಯವನ್ನು ಅರಿತಾಗೆಲ್ಲಾ ತನ್ನನ್ನು ತಾನು ದುರ್ಗಂಧ ಬೀರುವಂತೆ ಮಾಡಿಕೊಳ್ಳುತ್ತಿದ್ದ. ಪ್ಯಾಂಟ್ನಲ್ಲೇ ಮಲ ವಿಸರ್ಜನೆ ಮಾಡಿಕೊಂಡು ಇದರಿಂದ ಪೊಲೀಸರು ಸೇರಿದಂತೆ ಜನರು ಕೂಡಾ ಸಹಜವಾಗಿಯೇ ಈತನಿಂದ ದೂರ ಉಳಿದು ಬಿಡುತ್ತಿದ್ದರು. ಈ ಹಿಂಜರಿಕೆಯನ್ನೇ ಲಾಭ ಮಾಡಿಕೊಳ್ಳುತ್ತಿದ್ದ ಆತ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದ. ಈ ರೀತಿ ಹಲವು ಬಾರಿ ಮಾಡಿ ಆತ ತಪ್ಪಿಸಿಕೊಂಡಿದ್ದ.
ಆದರೆ ಆತನ ಈ ಉಪಾಯ ಹೆಚ್ಚು ಸಮಯ ಕೆಲಸ ಮಾಡಿಲ್ಲ. ಕೊನೆಗೂ ಆತನ ಮಲವಿಸರ್ಜನೆ ಮಾಡಿ ಓಡಿ ಹೋಗುವ ತಂತ್ರ ವಿಫಲವಾಗಿದೆ. ದೀಪಕ್ನ ಕೊಳಕು ಉಪಾಯದ ಬಗ್ಗೆ ತಿಳಿದಿದ್ದ ಅಧಿಕಾರಿಗಳು ಈ ಬಾರಿ ಅದನ್ನು ವಿಫಲಗೊಳಿಸಬೇಕೆಂದು ಮುಖಕ್ಕೆ ಮಾಸ್ಕ್ ಹಾಗೂ ಕೈಗಳಿಗೆ ಗ್ಲೌಸ್ಗಳನ್ನು ಧರಿಸಿ ಸಿದ್ದವಾಗಿ ಬಂದಿದ್ದರು. ಇದರಿಂದಾಗಿ ಪೊಲೀಸರು ದೀಪಕ್ನನ್ನು ಯಾವುದೇ ಡ್ರಾಮಾ ಇಲ್ಲದೆ ಕೊನೆಗೂ ಬಂಧಿಸಿದ್ದಾರೆ.
ದೀಪಕ್ಗೆ ಯಾವಾಗಲೂ ಚಾಕು ಹಿಡಿದುಕೊಂಡು ಹೋಗುವ ಅಭ್ಯಾಸವಿತ್ತು. ಅದನ್ನುಆತ ಅದೃಷ್ಟ ಎಂದು ಭಾವಿಸಿದ್ದ. ಆದರೆ ಆತನ ವಿರುದ್ಧ ಯಾವುದೇ ಹಿಂಸಾಚಾರ ಪ್ರಕರಣಗಳು ಇಲ್ಲ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಪೊಲೀಸ್ ದಾಖಲೆಗಳ ಪ್ರಕಾರ ದೀಪಕ್ ಕನಿಷ್ಠ ಆರು ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ.