ಬೇಲಿಯೇ ಎದ್ದು ಹೊಲ ಮೇಯುವ ಪ್ರಕರಣಗಳು ಬೆಂಗಳೂರಿನಲ್ಲಿ ಇತ್ತೀಚೆಗೆ ಹೆಚ್ಚಾಗತ್ತಿದ್ದು, ಈ ಸಾಲಿಗೆ ಮತ್ತೊಂದು ಉದಾಹರಣೆ ಸೇರ್ಪಡೆಯಾಗಿದೆ. ಹುಲಿಯುಗುರು ಮತ್ತು ಹುಲಿ ಚರ್ಮ ಮಾರುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕರೆದೊಯ್ದು ಆತನಿಗೆ ಜೀವ ಬೆದರಿಕೆ ಒಡ್ಡಿ ಮನೆಯವರಿಗೆ 40 ಲಕ್ಷ ಹಣ ನೀಡುವಂತೆ ಬೇಡಿಕೆಯಿಟ್ಟ ಪೊಲೀಸ್ ಗ್ಯಾಂಗ್ ವಿರುದ್ಧ ದೂರು ದಾಖಲಾಗಿದೆ. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಪೊಲೀಸರ ಕಿಡ್ನಾಪ್ಗೆ ನೆರವು ನೀಡಿದ್ದ ಆರೋಪ ಹೊತ್ತಿದ್ದ ಇನ್ನೂ ಮೂವರು ನಾಪತ್ತೆಯಾಗಿದ್ದಾರೆ.
ಮಾ. 18 ರಂದು ಹುಲಿಯುಗುರು ಮತ್ತು ಹುಲಿಚರ್ಮ ಮಾರುತ್ತಿದ್ದ ಆರೋಪದ ಮೇಲೆ ರಾಮಾಂಜನಿ ಎಂಬಾತನನ್ನು ಪೊಲೀಸರು ಎಳೆದೊಯ್ದಿದ್ದರು. ಆದರೆ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ಯದೇ, ಪ್ರಕರಣವನ್ನೂ ಸಹ ದಾಖಲಿಸದೇ ಗುಪ್ತ ಸ್ಥಳದಲ್ಲಿ ಆತನನ್ನು ಅಡಗಿಸಿಟ್ಟಿದ್ದರು. ಬಳಿಕ ಆತನ ಹಣೆಯ ಮೇಲೆ ಗನ್ ಇರಿಸಿ ಜೀವ ಬೆದರಿಕೆಯೊಡ್ಡಿ, ಮನೆಯವರಿಗೆ ಫೋನ್ ಮಾಡಿಸಿ 40 ಲಕ್ಷ ರೂ. ಹಣ ನೀಡುವಂತೆ ಒತ್ತಾಯಿಸಿದ್ದರು. ಗಾಬರಿಗೊಂಡ ಮನೆಯವರು ಅಪಹರಣಕಾರರ ವಿರುದ್ಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇತ್ತ ತನಿಖೆ ಪ್ರಾರಂಭಿಸಿದ ಬಾಗಲೂರು ಪೊಲೀಸರಿಗೆ ಈ ಪ್ರಕರಣದ ಹಿಂದಿರುವವರು ಪೊಲೀಸರೇ ಎಂಬ ಸುಳಿವು ಸಿಕ್ಕಿತ್ತು. ಈ ಬಗ್ಗೆ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿಯವರಿಗೆ ಮಾಹಿತಿ ನೀಡಿದ್ದರು. ಪರಾರಿಯಾದ ಪೊಲೀಸರ ಪತ್ತೆಗೆ ಬಾಗಲೂರು ಪೊಲೀಸರು ಬಲೆ ಬೀಸಿದ್ದಾರೆ.