ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಈಗಾಗಲೇ ಅಘೋಷಿತ ಯುದ್ಧ ಆರಂಭವಾಗಿದ್ದು, ಪಾಕ್ನ ಅಪ್ರಚೋದಿತ ದಾಳಿಗೆ ಭಾರತವು ತಕ್ಕ ಪ್ರತ್ಯುತ್ತರ ನೀಡುತ್ತಿದೆ.
ಇನ್ನು ನಿನ್ನೆ (ಮೇ.8) ರಾತ್ರಿ ಪಾಕ್ ಜಮ್ಮು, ರಾಜಸ್ಥಾನ, ಪಂಜಾಬ್ ಗಡಿಯಲ್ಲಿ ಕ್ಷಿಪಣಿ ಮತ್ತು ಡ್ರೋಣ್ ದಾಳಿಗೆ ಯತ್ನಿಸಿದ್ದು, ಇದರ ಬೆನ್ನಲ್ಲೇ ಗುಜರಾತ್ನಲ್ಲೂ ಕಟ್ಟೆಚ್ಚರವಹಿಸಲಾಗಿದೆ.
ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರಿಗೆ ದೂರವಾಣಿ ಕರೆ ಮಾಡಿ ರಾಜ್ಯದ ಭದ್ರತಾ ವ್ಯವಸ್ಥೆ, ಗಡಿ ಜಿಲ್ಲೆಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ನಿನ್ನೆ ಪಾಕಿಸ್ತಾನ ಜಮ್ಮು, ರಾಜಸ್ಥಾನ ಮತ್ತು ಪಂಜಾಬ್ ಸೇರಿದಂತೆ ಭಾರತದ ಹಲವಾರು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಸರಣಿ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು. ಪಾಕ್ ದಾಳಿ ಯತ್ನಕ್ಕೆ ಭಾರತದ ರಕ್ಷಣಾ ಪಡೆಗಳು ಯಶಸ್ವಿಯಾಗಿ ವಿಫಲಗೊಳಿಸಿದವು. ಆ ಮೂಲಕ ದೊಡ್ಡ ಪ್ರಮಾಣದ ಹಾನಿ ಮತ್ತು ಜೀವಹಾನಿಯನ್ನು ತಡೆಯಿತು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಿರ್ದಿಷ್ಟ ದಾಳಿ ನಡೆಸಿದ ಒಂದು ದಿನದ ನಂತರ ನಿನ್ನೆ ಅಪ್ರಚೋದಿತ ದಾಳಿ ಪಾಕ್ ಮಾಡಿತ್ತು.