ಶ್ರೀನಗರ: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಯ ಬೆನ್ನಲ್ಲೇ ಭಾರತದ ಭದ್ರತಾ ಪಡೆಗಳು ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಕಳೆದ ಕೇವಕ 24 ಗಂಟೆಗಳಲ್ಲಿ ಮೂವರು ಶಂಕಿತ ಉಗ್ರರ ಮನೆಗಳನ್ನು ಭದ್ರತಾ ಪಡೆಗಳು ಧ್ವಂಸಗೊಳಿಸಿದ್ದಾರೆ.
ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಮತ್ತೊಬ್ಬ ಭಯೋತ್ಪಾದಕ ಎಹ್ಸಾನ್ ಉಲ್ ಹಕ್ನ ಮನೆಯನ್ನು ಭದ್ರತಾ ಪಡೆಯು ಧ್ವಂಸ ಮಾಡಿದೆ. ಪುಲ್ವಾಮದಲ್ಲಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ಎಹ್ಸಾನ್ನ ಮನೆಯನ್ನು ಸೇನೆಯು ಕೆಡವಿದೆ. ಈ ಮೂಲಕ 24 ಗಂಟೆಯೊಳಗೆ ಮೂವರು ಉಗ್ರರ ಮನೆ ಉಡೀಸ್ ಆಗಿವೆ.
ಉಗ್ರ ಎಹ್ಸಾನ್ 2018ರಲ್ಲಿ ಪಾಕಿಸ್ತಾನದಿಂದ ತರಬೇತಿ ಪಡೆದಿದ್ದನೆಂದು ಹೇಳಲಾಗಿದ್ದು, ಇತ್ತೀಚೆಗೆ ಕಾಶ್ಮೀರದ ಕಣಿವೆಯನ್ನು ಮತ್ತೆ ಪ್ರವೇಶಿಸಿದ್ದ. ಶುಕ್ರವಾರ ಅನಂತನಾಗ್ ಜಿಲ್ಲೆಯ ಬಿಜ್ಬೆಹರಾದ ಟ್ರಾಲ್ನ ಗೋರಿ ಪ್ರದೇಶದಲ್ಲಿ ಸೇನೆಯು ಸಕ್ರಿಯ ಭಯೋತ್ಪಾದಕನ ಮನೆಯನ್ನು ಬಾಂಬ್ನಿಂದ ಸ್ಫೋಟಿಸಿತ್ತು. ಮತ್ತೊಬ್ಬ ಶಂಕಿತ ಉಗ್ರನ ಮನೆಯನ್ನು ಬುಲ್ಡೋಜರ್ನಿಂದ ಕೆಡವಲಾಗಿತ್ತು.
ಶೋಪಿಯಾನ್ನ ಚೋಟಿಪೋರಾ ಪ್ರದೇಶದ ನಿವಾಸಿ ಲಷ್ಕರ್ ಭಯೋತ್ಪಾದಕ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟಾಯ ಮನೆಯನ್ನೂ ಸಹ ಧ್ವಂಸ ಮಾಡಲಾಗಿದೆ. ಈತ ಕಳೆದ 4 ವರ್ಷಗಳಿಂದ ಉಗ್ರ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದ. ಅಲ್ಲದೇ ದೇಶ ವಿರೋಧಿ ಕಾರ್ಯಗಳಿಗೆ ಬೆಂಬಲಿಸುತ್ತಿದ್ದನು ಎಂದು ಮೂಲಗಳು ತಿಳಿಸಿವೆ.