ಬಿಎಂಟಿಸಿ ತನಿಖಾಧಿಕಾರಿಗಳು ಜೇಬಿನಲ್ಲಿದ್ದ ವೈಯಕ್ತಿಕ ಹಣವನ್ನು ಜಪ್ತಿ ಮಾಡಿಕೊಂಡು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಬಿಎಂಟಿಸಿ ಚಾಲಕರೊಬ್ಬರು ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ. ಶನಿವಾರ ಎಲೆಕ್ಟ್ರಾನಿಕ್ ಸಿಟಿಯ ಬಸ್ ನಿಲ್ದಾಣದಲ್ಲಿ ದಾಳಿ ನಡೆಸಿದ ವೇಳೆ ಚಾಲಕ ಲೋಕೇಶ್ ಬಳಿ ಐವತ್ತು ಸಾವಿರ ರೂ. ಹಣ ಪತ್ತೆಯಾಗಿತ್ತು. ಅದನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡು, ಚಾಲಕನನ್ನು ವಜಾಗೊಳಿಸಿದ್ದರು.
ತನ್ನ ಮಗಳು ಚಾಮರಾಜಪೇಟೆಯ ಆದರ್ಶ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದಾಳೆ. ಆಕೆಯ ಕಾಲೇಜಿನ ಶುಲ್ಕ ಕಟ್ಟಲು ಇಟ್ಟುಕೊಂಡಿದ್ದೆ ಎಂದರೂ ಅಧಿಕಾರಿಗಳು ಸೊಪ್ಪು ಹಾಕಲಿಲ್ಲ ಎಂದು ಲೋಕೇಶ್ ಅಳಲು ತೋಡಿಕೊಂಡಿದ್ದಾರೆ. ತನ್ನ ಹಣವನ್ನು ವಾಪಸ್ ಕೊಡಿಸಿ ಕರ್ತವ್ಯಕ್ಕೆ ಮರಳಿ ಹಾಜರಾಗಲು ಅನುಮತಿ ನೀಡುವಂತೆ ಮಾಡಬೇಕೆಂದು ಲೋಕೇಶ್ ವಕೀಲರ ಮೂಲಕ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದಾರೆ.