ಪಟ್ನಾ: ಬಿಹಾರದ ಸಸಾರಾಮ್ ಜಿಲ್ಲೆಯಲ್ಲಿ ನಡೆದ ಗಲಭೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಶಾಸಕ ಮೊಹಮ್ಮದ್ ನೆಹಾಲುದ್ದೀನ್ , ಮುಸ್ಲಿಮರು ಆತ್ಮರಕ್ಷಣೆಗಾಗಿ ಬಾಂಬ್ ತಯಾರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಸಾರಾಂನಲ್ಲಿ ರಾಮನವಮಿ ಮೆರವಣಿಗೆ ವೇಳೆ ಗಲಭೆ ನಡೆದಿದ್ದು, ಹಿಂಸಾಚಾರ ಮುಂದುವರಿದಿದೆ. ಈ ಮಧ್ಯೆ ಆರ್ಜೆಡಿ ಶಾಸಕ ಮೊಹಮ್ಮದ್ ನೆಹಾಲುದ್ದೀನ್ ಈ ವಿಚಾರದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಯುವಕರು ತಮ್ಮ ರಕ್ಷಣೆಗಾಗಿ ಬಾಂಬ್ ಗಳನ್ನು ತಯಾರಿಸುತ್ತಿದ್ದಾರೆ. ಹಿಂಸಾಚಾರದ ವೇಳೆ ಮುಸ್ಲಿಮರು ಸತ್ತಿದ್ದರೆ ಏನು ಮಾಡುತ್ತಿದ್ದರು. ಮುಸ್ಲಿಂ ಯುವಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆಲ್ಲುವುದು ಹಾಗೂ ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ತರುವುದು ಅವರ ಗುರಿಯಾಗಿದೆ ಎಂದು ಆರೋಪಿಸಿದ್ದಾರೆ.
ರಾಮನವಮಿಯಂದು ನಡೆದ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದಿತ್ತು. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಅಂದಿನಿಂದ, ನಗರದ ಮೂಲೆ ಮೂಲೆಗಳಲ್ಲಿ ಪೋಲಿಸ್ ಪಡೆ ಬೀಡುಬಿಟ್ಟಿದೆ. ಅಲ್ಲದೇ, ಹಲವಾರು ಪೊಲೀಸ್ ತಂಡಗಳು ನಿರಂತರವಾಗಿ ಗಸ್ತು ತಿರುಗುತ್ತಿವೆ. ಇದುವರೆಗೂ 109 ಮಂದಿಯನ್ನು ಬಂಧಿಸಲಾಗಿದೆ.
ಪರಿಸ್ಥಿತಿ ನಿಯಂತ್ರಿಸಲು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಸಸಾರಂನಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ. ಬಿಹಾರದ ಸಿಎಂ ನಿತೀಶ್ ಕುಮಾರ್ ಹಿಂಸಾಚಾರದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಘೋಷಿಸಿದ್ದಾರೆ.