ಬೆಂಗಳೂರು : ರಾಜ್ಯ ಸರ್ಕಾರದ ಮೀಸಲಾತಿ ವಿಚಾರದ ವಿರುದ್ಧ ಮುಸ್ಲಿಂ ಸಮುದಾಯ ತಿರುಗಿಬಿದ್ದಿದೆ. 2ಬಿ ಮೀಸಲಾತಿ ಅಡಿಯಲ್ಲಿದ್ದ ಮುಸ್ಲಿಂರನ್ನು, ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಸೇರಿಸಿದ್ದನ್ನು ನಾವು ಒಪ್ಪುವುದಿಲ್ಲ ಎಂದು ಸರ್ಕಾರದ ನಿರ್ಧಾರದ ವಿರುದ್ಧ ಮುಸ್ಲಿಂ ಸಮುದಾಯ ಅಸಮಾಧಾನ ಹೊರಹಾಕಿದೆ.
ನಮಗೆ 2ಬಿಯಲ್ಲಿ ಶೇ 4 ರಷ್ಟು ಪ್ರತ್ಯೇಕ ಮೀಸಲಾತಿ ಇತ್ತು. ಆದರೆ ಈಗ ಈ ಮೀಸಲಾತಿ ನಮಗೆ ಸಿಗುವುದಿಲ್ಲ. ಈ ಹಿನ್ನೆಲೆ ನಾವು ಅಧಿಸೂಚನೆ ಹೊರಡಿಸದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಹೇಳಿದರು.
ರಾಜ್ಯ ಸರ್ಕಾರ 2ಬಿಯಲ್ಲಿದ್ದ ಮುಸ್ಲಿಂರನ್ನು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿಸಿದ್ದನ್ನು ನಾವು ಒಪ್ಪುವುದಿಲ್ಲ. ಏಕೆಂದರೆ ಮುಂದಿನ ದಿನಗಳಲ್ಲಿ ಇಡ್ಲೂಎಸ್ಗೆ ಯಾವ ಸಮುದಾಯದವರನ್ನು ಬೇಕಾದರೂ ಸರ್ಕಾರ ಸೇರಿಸಬಹುದು. ಹೀಗಾಗಿ ಇದನ್ನು ಮುಸ್ಲಿಂ ಸಮುದಾಯ ಒಪ್ಪಲ್ಲ ಎಂದು ಸರ್ಕಾರದ ನಿರ್ಧಾರದ ವಿರುದ್ಧ ಮುಸ್ಲಿಂ ಸಮುದಾಯ ಅಸಮಾಧಾನ ಹೊರಹಾಕಿದೆ.
ಮುಸ್ಲಿಮರು ಈ ಹಿಂದೆ ರಾಜ್ಯದಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) 2B ಗುಂಪಿನ ಅಡಿಯಲ್ಲಿದ್ದರು. ಇದರಿಂದ ಈ ಸಮುದಾಯಕ್ಕೆ ಶೇ 4 ರಷ್ಟು ಮೀಸಲಿತ್ತು. ಪ್ರವರ್ಗ 2 ಬಿಯಲ್ಲಿರುವ ಮುಸ್ಲಿಮರನ್ನು EWS ಗೆ ಸೇರಿಸಿ, 2ಬಿಯಲ್ಲಿರುವ ಶೇ 4ರಷ್ಟು ಮೀಸಲಾತಿಯನ್ನು ಪ್ರಬಲ ವರ್ಗಗಳಾದ ಒಕ್ಕಲಿಗರಿಗೆ ಹಾಗೂ ವೀರಶೈವ ಲಿಂಗಾಯತರಿಗೆ ತಲಾ ಎರಡು ಪ್ರತಿಶತದಷ್ಟು ಸರ್ಕಾರ ಹಂಚಿಕೆ ಮಾಡಿದೆ. ಇದುವರೆಗೆ ಸಾಮಾಜಿಕವಾಗಿ ಹಿಂದುಳಿದ ಮೀಸಲಾತಿ ಸಿಗುತ್ತಿತ್ತು. ಆದರೆ ಈಗ ಮುಸ್ಲಿಂರಿಗೆ ಅನ್ಯಾಯವಾಗುತ್ತೆ. ನಮ್ಮಲ್ಲಿ ಜಾತಿ ಪದ್ಧತಿಯಿಲ್ಲ. ಮುಸ್ಲಿಂರು ಸಾಮಾಜಿಕವಾಗಿ ಹಿಂದುಳಿದವರು. ಸರ್ಕಾರದ ಈ ನಡೆಯಿಂದ ಹಿಂದುಳಿದಿರುವ ನಮ್ಮ ಸಮುದಾಯದವರಿಗೆ ತೊಂದರೆಯಾಗಲಿದೆ ಎಂದು ಶಾಫಿ ಸಆದಿ ಹೇಳಿದ್ರು
ಬೆಂಗಳೂರು ಉತ್ತರ ವಕ್ಫ್ ಸಲಹಾ ಸಮಿತಿ ಚೇರ್ಮೆನ್, ಸಯ್ಯದ್ ಅರ್ಷದ್ ಮಾತನಾಡಿ ಸರ್ಕಾರದ ನಿರ್ಧಾರ ಸರಿ ಇಲ್ಲ ಎಂದು ಅಭಿಪ್ರಾಯ ಪಟ್ಟರು
“ಇದು ನಿರ್ಗಮಿಸುತ್ತಿರುವ ಸಿಎಂ ಬೊಮ್ಮಾಯಿ ಅವರ ರಾಜಕೀಯ ಗಿಮಿಕ್. ಅವರು ಈ ಗಿಮಿಕ್ಗಳಿಂದ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಭಾವಿಸಿದ್ದಾರೆ.ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟಾಚಾರ ಮತ್ತು ದುರಾಡಳಿತ ಸಮಾಜದ ಪ್ರತಿಯೊಂದು ವರ್ಗದ ಮೇಲೆ ಪರಿಣಾಮ ಬೀರಿದೆ. ಅವರ ಮುಸ್ಲಿಂ ವಿರೋಧಿ ಅಜೆಂಡಾ ಮತ್ತು ಕಾರ್ಯಕ್ರಮಗಳಿಂದ ನಮ್ಮ ಸಮುದಾಯ ಬೇಸತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸರ್ಕಾರವನ್ನು ಜನರೇ ಕಿತ್ತೊಗೆಯುತ್ತಾರೆ”
– ಸಯ್ಯದ್ ಅರ್ಷದ್, ಚೇರ್ಮನ್, ಬೆಂಗಳೂರು ಉತ್ತರ ವಕ್ಫ್ ಸಲಹಾ ಸಮಿತಿ