ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಸಿಂಧ್ (Sindh) ಪ್ರಾಂತ್ಯದಲ್ಲಿ 25 ವರ್ಷದ ಹಿಂದೂ ಯುವ ರೈತ ಮತ್ತು ಸಮುದಾಯ ಕಾರ್ಯಕರ್ತ ಕೈಲಾಶ್ ಕೊಹ್ಲಿ (Kailash Kohli) ಅವರನ್ನು ಗುಂಡಿಕ್ಕಿ ಕೊಂದ ಘಟನೆ ನಡೆದಿದೆ. ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ನಡೆಸಿದ ಈ ಹತ್ಯೆ ಸ್ಥಳೀಯ ನಿವಾಸಿಗಳಲ್ಲಿ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗಳಿಗೆ ಕಾರಣವಾಗಿದೆ.
ಪೊಲೀಸ್ ದೂರಿನ ಪ್ರತಿಯ ಪ್ರಕಾರ, ಜನವರಿ 4 ರಂದು ಬಡಿನ್ ಜಿಲ್ಲೆಯ ತಹಸಿಲ್ ತಲ್ಹಾರ್ ವ್ಯಾಪ್ತಿಯ ಪೀರು ಲಶಾರಿಯ ಗೋಥ್ ದಾಹೋದಲ್ಲಿ ಹತ್ಯೆ ನಡೆದಿದೆ. ಅಲ್ಲಿ ಹಂತಕರು ಹಗಲು ಹೊತ್ತಿನಲ್ಲಿಯೇ ಕೊಹ್ಲಿಯನ್ನು ಅಡ್ಡಗಟ್ಟಿ ಆತನ ಎದೆಗೆ ಎರಡು ಬಾರಿ ಗುಂಡುಗಳನ್ನು ಹಾರಿಸಿದ್ದಾರೆ ಎಂದು ಹೇಳಲಾಗಿದೆ. ಗುಂಡೇಟಿಗೆ ಕೊಹ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸಿಂಧ್ ಪ್ರಾಂತ್ಯದ ಹಿಂದೂಗಳ ಅತ್ಯಂತ ಹಿಂದುಳಿದ ಗುಂಪುಗಳಲ್ಲಿ ಒಂದಾಗಿರುವ ಆ ಪ್ರದೇಶದಲ್ಲಿ ಸ್ಥಳೀಯ ಸಮುದಾಯದ ಸಮಸ್ಯೆಗಳು, ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಪ್ರತಿಪಾದಿಸುವುದಕ್ಕೆ ಕೊಹ್ಲಿ ಹೆಸರುವಾಸಿಯಾಗಿದ್ದರು. ಈ ಹತ್ಯೆಯು ಬಡಿನ್ನ ಹಿಂದೂ ನಿವಾಸಿಗಳನ್ನು ಆಘಾತಗೊಳಿಸಿದೆ. ತಾವು ಆ ಪ್ರದೇಶದಲ್ಲಿ ಬಲವಂತದ ಮತಾಂತರ, ಅಪಹರಣ ಮತ್ತು ಹಿಂಸಾತ್ಮಕ ಬೆದರಿಕೆಯ ಭಯದಲ್ಲಿ ತುಂಬಾ ವರ್ಷಗಳಿಂದ ಬದುಕುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೊಹ್ಲಿ ಹತ್ಯೆಯ ಬಳಿಕ ಗ್ರಾಮಸ್ಥರು ಭಾರೀ ಪ್ರತಿಭಟನೆಗಳನ್ನು ಪ್ರಾರಂಭಿಸಿದ್ದಾರೆ. ಪ್ರಮುಖ ರಸ್ತೆಗಳನ್ನು ತಡೆದು, ಕೊಹ್ಲಿ ಹತ್ಯೆಯ ದಾಳಿಕೋರರನ್ನು ಬಂಧಿಸುವವರೆಗೆ ಅಲ್ಲಿಂದ ಏಳಲು ನಿರಾಕರಿಸಿದ್ದಾರೆ.
ಇನ್ನು ಕೊಹ್ಲಿ ಹತ್ಯೆ ಸಾಮಾಜಿಕ ಜಾಲತಾಣದಲ್ಲೂ ಭಾರೀ ಸದ್ದು ಮಾಡುತ್ತಿದೆ. ಆತನ ಸಾವಿಗೆ ತ್ವರಿತವಾಗಿ ನ್ಯಾಯ ಒದಗಿಸುವಂತೆ ಸ್ಥಳೀಯರು, ಕಾರ್ಯಕರ್ತರು ಮತ್ತು ಹಕ್ಕುಗಳ ಗುಂಪುಗಳು ಪ್ರಾಂತೀಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಾಮಾಜಿಕ ಮಾಧ್ಯ ಪ್ಲಾಟ್ಫಾರ್ಮ್ಗಳಲ್ಲಿ #JusticeForKailashKolhi ನಂತಹ ಹ್ಯಾಶ್ಟ್ಯಾಗ್ಗಳು ಎಲ್ಲೆಡೆ ಕಾಣಿಸಿಕೊಳ್ಳುತ್ತಿವೆ.
ಇದನ್ನೂ ಓದಿ : ಗಾಜಾ ಪಟ್ಟಿಗೆ ಸೇನೆ ಪೂರೈಕೆ – ಪಾಕಿಸ್ತಾನವನ್ನು ನಂಬೋದಿಲ್ಲ ಎಂದ ಇಸ್ರೇಲ್!