ಬೆಂಗಳೂರು: ಚುನವಾಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಉರಿಗೌಡ ನಂಜೇಗೌಡ ಚರ್ಚೆ ಹೆಚ್ಚಾಗುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಚುನಾವಣಾ ಪ್ರಚಾರದ ಸರಕಾಗಿ ಮಾರ್ಪಾಡಾಗಿರುವ ಉರಿಗೌಡ ನಂಜೇಗೌಡ ಹೆಸರಿನ ಸಿನಿಮಾ ಕೂಡಾ ಸೆಟ್ಟೇರಲು ಸಜ್ಜಾಗಿದೆ. ಮೇ 18ನೇ ತಾರೀಕಿಗೆ ಸಿನಿಮಾ ಮುಹೂರ್ತ ಫಿಕ್ಸ್ ಆಗಿದೆ.
ಸಚಿವ ಹಾಗೂ ನಿರ್ಮಾಪಕ ಮುನಿರತ್ನ ನಾಯ್ಡುರವರ ವೃಷಭಾದ್ರಿ ಪ್ರೊಡಕ್ಷನ್ ಬ್ಯಾನರ್ ಉರಿಗೌಡ ನಂಜೇಗೌಡ ಚಿತ್ರ ನಿರ್ಮಾಣ ಕೈಗೊಂಡಿದ್ರೆ, ಸಿನಿಮಾಗೆ ಸಚಿವ ಸಿ.ಎನ್ ಅಶ್ವತ್ಥನಾರಾಯಣ್ ಚಿತ್ರಕಥೆ ಒದಗಿಸಲಿದ್ದಾರೆ. ಇನ್ನು ಈ ಸಿನಿಮಾವನ್ನು ಬಿಜೆಪಿ ನಾಯಕರಾದ ಸಿಟಿ ರವಿ ಹಾಗೂ ಆರ್.ಅಶೋಕ್ ಅರ್ಪಿಸುತ್ತಿರೋದಾಗಿ ಈಗಾಗಲೇ ಪೋಸ್ಟರ್ ಕೂಡಾ ಬಿಡುಗಡೆ ಮಾಡಲಾಗಿದೆ. ಈ ವಿಚಾರವನ್ನು ಸ್ವತಃ ಮುನಿರತ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ
ಉರಿಗೌಡ ನಂಜೇಗೌಡ ಪಾತ್ರಗಳು ಸತ್ಯವಾದ ಪಾತ್ರಗಳೋ ಅಥವಾ ಕಾಲ್ಪನಿಕ ಪಾತ್ರಗಳೋ ಎಂಬ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಸಿನಿಮಾ ಸೆಟ್ಟೇರುವ ಸುದ್ದಿ ಹೊರಬಿದ್ದಿದೆ. 1750-1799 ನಡುವಿನ ಸತ್ಯ ಘಟನೆಗಳ ಆಧಾರಿತ ಸಿನಿಮಾ ಎಂದೇ ಪ್ರಚಾರ ಮಾಡಲಾಗುತ್ತಿದ್ದು ರಾಜಕೀಯಕ್ಕೆ ಉರಿಗೌಡ ನಂಜೇಗೌಡರನ್ನು ಬಿಜೆಪಿ ಎಳೆದುತಂದಿದೆ.
ವಿಚಾರಗಳನ್ನು ಜನರಿಗೆ ತಲುಪಿಸುವ ಶಕ್ತಿಯುತ ಮಾದ್ಯಮವಾದ ಸಿನಿಮಾ ಕ್ಷೇತ್ರವನ್ನು ಚುನಾವಣೆ ಸಮಯದಲ್ಲಿ ಬಿಜೆಪಿ ಆಯ್ಕೆ ಮಾಡಿಕೊಂಡಿದೆ. ಸಿನಿಮಾ ಸೆಟ್ಟೇರುವಷ್ಟರಲ್ಲಿ ಅದಾಗಲೇ ಚುನಾವಣೆ ಮುಗಿದಿರುತ್ತೆ. ಆದ್ರೆ ಈ ವಿಚಾರವನ್ನು ಮುಂದಿಟ್ಟುಕೊಂಡು ಭಾರತೀಯ ಜನತಾ ಪಾರ್ಟಿ ಒಕ್ಕಲಿಗರ ಮತ ಒಡೆಯುವ ತಂತ್ರಗಾರಿಕೆಗೆ ಮುಂದಾಗಿದೆ ಎಂಬುದು ರಾಜಕೀಯ ವಲಯದ ವಿಶ್ಲೇಷಣೆ.