ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವು ಜೋರಾಗೇ ಕೇಳಿ ಬರುತ್ತಿದೆ. ಇದೀಗ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ (Snehamayi Krishna) ಹೊಸ ಟ್ವಿಸ್ಟ್ ನೀಡಿದ್ದು, ಮುಡಾ (Muda Scam) ತೀರ್ಪು ಬಂದ ನಂತರ ರಾಜ್ಯದಲ್ಲಿ ಸಿಎಂ ಬದಲಾಗಬಹುದು ಎಂದು ಹೇಳಿದ್ದಾರೆ.
ಹೌದು… ಸಿಎಂ ಬದಲಾವಣೆ ಕುರಿತು ಸ್ನೇಹಮಯಿ ಕೃಷ್ಣ ಮಾತನಾಡಿದ್ದಾರೆ. ಕೋರ್ಟ್ ಆದೇಶದ ಬಳಿಕ ಯತೀಂದ್ರ ಅವರು ತಮ್ಮ ತಂದೆ ಸಿದ್ದರಾಮಯ್ಯನವರಿಗೆ ತಿಳುವಳಿಕೆ ಹೇಳುವ ಮೂಲಕ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿಸಬಹುದು ಎಂದು ಹೇಳಿದ್ದಾರೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿ ಆದೇಶ ಬಂದ ನಂತರ ಬಹುಶಃ ರಾಜ್ಯ ರಾಜಕೀಯದಲ್ಲಿ ನಡೆಯಬೇಕಾಗಿದ್ದ ನವೆಂಬರ್ ಕ್ರಾಂತಿ ಬದಲು ಡಿಸೆಂಬರ್ ಕ್ರಾಂತಿ ನಡೆಯಬಹುದು. ಏಕೆಂದರೆ ಯಾವುದಾದರೂ ಹಗರಣ ಇದ್ದರೆ ಮುಖ್ಯಮಂತ್ರಿ ಸ್ಥಾನವನ್ನು ಬದಲಾಯಿಸಬಹುದು ಎಂದು ಸ್ವತಃ ಸಿದ್ದರಾಮಯ್ಯನವರ ಮಗ ಯತೀಂದ್ರರವರು ಮಾಧ್ಯಮಗಳ ಮುಂದೆ ಈ ಹಿಂದೆ ಹೇಳಿದ್ದರು ಎಂದು ಕುಟುಕಿದರು.
ಈ ಹಿಂದೆ ಮುಡಾ ಪ್ರಕರಣ ದಾಖಲಾಗುತ್ತಿದ್ದಂತೆ ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಾಯಿಗೆ ನೀಡಲಾಗಿದ್ದ ಅಕ್ರಮ 24 ನಿವೇಶನಗಳನ್ನು ಒಂದೇ ದಿನದಲ್ಲಿ ವಾಪಾಸ್ಸು ಕೊಡಿಸಿದ್ದರು. ಇನ್ನೂ ಡಿಸೆಂಬರ್ನಲ್ಲಿ ನ್ಯಾಯಾಲಯ ಬಿ ರಿಪೋಟ್ ತಿರಸ್ಕರಿಸಿ ಹಗರಣ ನಡೆದಿದೆ ಎಂದು ಆದೇಶಿಸಿದರೆ ಯತೀಂದ್ರ ಅವರು ತಮ್ಮ ತಂದೆ ಸಿದ್ದರಾಮಯ್ಯ ಹೇಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಬಹುದು ಎಂದು ವ್ಯಂಗ್ಯವಾಡಿದರು.
ನ್ಯಾಯಾಲಯದಲ್ಲಿ ಇಂದು ನಡೆದಿದ್ದೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ಸಲ್ಲಿಸಿದ್ದರು. ಈ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ವಿಚಾರಣೆ ವೇಳೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಅಂತಿಮ ವರದಿ ಸಲ್ಲಿಸಲು ಪ್ರಾಸಿಕ್ಯೂಷನ್ ಮತ್ತೆ ಸಮಯ ಕೋರಿ ನ್ಯಾಯಾಲಯದ ಮುಂದೆ ಮನವಿ ಮಾಡಿತ್ತು. ಆದರೆ, ನ್ಯಾಯಾಲಯ ಪ್ರಾಸಿಕ್ಯೂಷನ್ಗೆ ಮತ್ತಷ್ಟು ಸಮಯ ನೀಡುವುದಕ್ಕೆ ನಿರಾಕರಿಸಿ, ವಿಚಾರಣೆಗೆ ಹೊಸ ಗಡುವುಗಳನ್ನು ಸೂಚಿಸಿದೆ.
ನ್ಯಾಯಾಲಯವು ಡಿಸೆಂಬರ್ 18ರೊಳಗೆ ಅಂತಿಮ ವರದಿ ಸಲ್ಲಿಸಬೇಕೆಂದು ಸೂಚಿಸಿದೆ. ಬಿ.ರಿಪೋರ್ಟ್ ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡುವುದಿದ್ದರೇ ಡಿ. 16ರ ಒಳಗೆ ಸಲ್ಲಿಸುವುವಂತೆ ದೂರುದಾರರು, ಲೋಕಾಯುಕ್ತ ಹಾಗೂ ಇಡಿಗೆ ಸೂಚನೆ ನೀಡಿದೆ. ಈ ಹಿಂದೆ ಬಿ.ರಿಪೋರ್ಟ್ ಸಲ್ಲಿಸಲು ಅಕ್ಟೋಬರ್ 8 ರಿಂದ 2 ತಿಂಗಳು ಗಡುವು ನೀಡಿತ್ತು. ಹೀಗಾಗಿ ಮತ್ತೆ ಸಮಯ ನೀಡಲು ಕೋರ್ಟ್ ನಿರಾಕರಿಸಿದೆ.
ಇದನ್ನೂ ಓದಿ: MUDA SCAM: ಮುಡಾ ಪ್ರಕರಣ ; ಮಹತ್ವದ ತೀರ್ಮಾನ ತೆಗೆದುಕೊಂಡ ಕೋರ್ಟ್