ಬೆಂಗಳೂರು :ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನ (MLA Munirathna ) ಅವರ ವಿರುದ್ದ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದು, ಅವರಿಗೆ ಬಿಗ್ ರಿಲೀಫ್ ದೊರೆತಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮುನಿರತ್ನ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಲಾಗಿದೆ.
ಮಹಿಳೆಯೊಬ್ಬರು ಆರ್ಎಂಸಿ ಯಾರ್ಡ್ ನಲ್ಲಿ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆಂದು ದೂರು ನೀಡಿದ್ದರು. ಮಹಿಳೆ ಸಲ್ಲಿಸಿರುವ ಆರೋಪದಲ್ಲಿ ಯಾವುದೇ ಸಾಕ್ಷ್ಯಾಧಾರವಿಲ್ಲ. ಆಕೆ ನಿದ್ರೆ ಮಾತ್ರೆ ನೀಡಿದ್ದಾಗಿ ಹೇಳಿದ್ದಳು. ನಿದ್ರೆ ಮಾತ್ರೆ ಸೇವಿಸುವ ಕುರಿತು ರಿಹರ್ಸಲ್ ನಡೆಸಿದ್ದಳು. ಆದರೆ ಆಕೆಯ ದೇಹದಲ್ಲಿ ನಿದ್ರೆ ಮಾತ್ರೆ ಅಂಶ ಕಂಡುಬಂದಿಲ್ಲ. ಹೀಗಾಗಿ ಪ್ರಕರಣದಲ್ಲಿ ಸಾಕ್ಷ್ಯಾಧಾರದ ಕೊರತೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಮೇಲಿನ ಆರೋಪ ಸುಳ್ಳೆಂದು ವಾದಿಸಿದ್ದ ಶಾಸಕ ಮುನಿರತ್ನ, ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದರು. ಪ್ರರಕಣದಲ್ಲಿ ಶಾಸಕ ಮುನಿರತ್ನ ವಿರುದ್ಧ ಬಲವಂತದ ನಿರ್ಧಾರಗಳನ್ನು ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ನೀಡಿತ್ತು. ಪೊಲೀಸರು ಈಗ ಬಿ ರಿಪೋರ್ಟ್ ಸಲ್ಲಿಸಿದ ಬಳಿಕ ತಡೆಯನ್ನು ವಿಸ್ತರಣೆ ಮಾಡಿದೆ.
ಇದಲ್ಲದೆ ಮುನಿರತ್ನ ವಿರುದ್ದ ದಲಿತ ನಿಂದನೆ, ಹಲ್ಲೆ ಮತ್ತು ಪ್ರಾಣಬೆದರಿಕೆ ಆರೋಪಗಳೂ ಸಹ ಕೇಳಿಬಂದಿತ್ತು. ಕಳೆದ ವರ್ಷ ಗುತ್ತಿಗೆದಾರರೊಬ್ಬರು ಬಿಡುಗಡೆ ಮಾಡಿದ ಆಡಿಯೋ ದಲ್ಲಿ ಶಾಸಕ ಮುನಿರತ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ದಾಖಲಾಗಿತ್ತು. ಅಲ್ಲದೇ ಗುತ್ತಿಗೆದಾರರ ಪತ್ನಿಯ ಬಗ್ಗೆಯೂ ಹೀನಾಯ ಭಾಷೆಯಲ್ಲಿ ಅಸಭ್ಯ ಪದಗಳಿಂದ ಬೈದಿರುವುದು ಆಡಿಯೋದಲ್ಲಿತ್ತು. ಈ ಆಡಿಯೋ ವೈರಲ್ ಆದ ಬಳಿಕ ಗುತ್ತಿಗೆದಾರರು ದೂರು ದಾಖಲಿಸಿದ್ದರು. ಹಲವು ದಲಿತ ಪರ ಸಂಘಟನೆಗಳು ಮುನಿರತ್ನ ವಿರುದ್ದ ಪ್ರತಿಭಟನೆ ನಡೆಸಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದವು.
ಶಾಸಕ ಮುನಿರತ್ನ (MLA Munirathna) ಮತ್ತೆ ತಮ್ಮ ನಾಲಿಗೆ ಹರಿಬಿಡುವ ಮೂಲಕ ವಿವಾದ ಸೃಷ್ಟಿಸಿದ್ದರು. ಹೆಣ್ಣಿಗೆ ಯಾವ ಹುಚ್ಚು ಹಿಡಿದರೂ ಬಿಡಿಸಬಹುದು. ಆದರೆ ಎಂಎಲ್ಎ ಆಗುವ ಹುಚ್ಚು ಹಿಡಿದರೆ ಬಿಡಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ವಿರುದ್ದ ಪರೋಕ್ಷವಾಗಿ ಹರಿಹಾಯ್ದಿದ್ದರು.
ಮಲ್ಲತ್ತಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಮುನಿರತ್ನ ಈ ಹೇಳಿಕೆ ನೀಡಿದ್ದರು.
ನಾನು ಯಾರನ್ನೂ ದೂರುವುದಿಲ್ಲ. ಇಲ್ಲಿ ಈ ದೇವರು ಹಣೆಯ ಮೇಲೆ ಅದೇನು ಬರೆದಿದ್ದಾನೋ ಅದೇ ನಡೆಯುತ್ತದೆ. ಪೊಲೀಸನವರಿಗೆ ಎಲ್ಲರಿಗೂ ನನ್ನ ಧನ್ಯವಾದಗಳು. ನನ್ನ ರಕ್ಷಣೆಗಾಗಿ ನೀವೆಲ್ಲರೂ ಹಗಲಿರುಳು ಶ್ರಮಿಸುತ್ತಿದ್ದೀರಿ. ನನ್ನನ್ನು ಏನು ಮಾಡುತ್ತಾರೋ ಗೊತ್ತಿಲ್ಲ. ಏನು ಬೇಕಾದರೂ ಮಾಡಲಿ. ಈ ಭೂಮಿಗೆ ಬಂದ ಮೇಲೆ ನಾವು ಹೋಗಲೇ ಬೇಕು. ಅವರ ಕೈಯಿಂದ ನಾನು ಹೋಗಬೇಕು ಎಂದು ಬರೆದಿದ್ದರೆ ಯಾರು ತಪ್ಪಿಸಲು ಆಗುತ್ತೆ? ಅದೂ ಸಹ ಆಗಿಬಿಡಲಿ ಎಂದು ನುಡಿದಿದ್ದ ಮುನಿರತ್ನ, ಒಂದು ಹೆಣ್ಣಿಗೆ ಯಾವ ಹುಚ್ಚು ಹಿಡಿದರೆ ಬೇಕಾದರೂ ತಪ್ಪಿಸಬಹುದು. ಈ ಎಂಎಲ್ಎ ಹುಚ್ಚು ಹಿಡಿದರೆ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಶಾಸಕ ಮುನಿರತ್ನ ಅವರ ನುಡಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಇದನ್ನೂ ಓದಿ : ಬಿಜೆಪಿ ಕಾರ್ಯಕರ್ತೆಗೆ ಏಡ್ಸ್ ಇಂಜೆಕ್ಷನ್ – ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್!