ಬೆಂಗಳೂರು: ಇತ್ತೀಚೆಗೆ ಬಿಜೆಪಿ (Bjp) ನಾಯಕರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿರುವುದರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್ ಅನ್ನು ಮಿತವಾಗಿ ಬಳಸುವಂತೆ ಕರೆ ನೀಡಿದ್ದಾರೆ. ಈ ವಿಚಾರವನ್ನು ಉಲ್ಲೇಖಿಸಿ ಟೀಕಿಸಿರುವ ಖರ್ಗೆ, ಬಿಜೆಪಿಯವರ ದಿಢೀರ್ ಮೆಟ್ರೋ ಪ್ರೇಮ ಕೇವಲ ಪ್ರದರ್ಶನ ಎಂದು ಲೇವಡಿ ಮಾಡಿದ್ದಾರೆ.
ಫೋಟೋಗೆ ಫೋಸ್ ಕೊಡುವುದು ಹಳೇ ಚಾಳಿ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಬಿಜೆಪಿ ನಾಯಕರು ಪ್ರತಿದಿನ ಮೆಟ್ರೋದಲ್ಲಿ ಓಡಾಡುವುದಾದರೆ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಅವರದ್ದು ಕೇವಲ ಒಂದು ದಿನದ ನಾಟಕವಷ್ಟೇ. ಒಬ್ಬ ಮಂತ್ರಿ ಮೆಟ್ರೋ ಹತ್ತುವುದು, ಮತ್ತೊಬ್ಬರು ಬೈಕ್ ಹತ್ತಿ ಫೋಟೋಗೆ ಫೋಸ್ ಕೊಡುವುದು ಬಿಜೆಪಿಯವರ ಹಳೇ ಚಾಳಿಬಿಡಿ ಎಂದು ಟೀಕಿಸಿದರು.
ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸಲು ಸವಾಲು
ಬಿಜೆಪಿ ನಾಯಕರಿಗೆ ನಿಜವಾಗಿಯೂ ಜನಸಾಮಾನ್ಯರ ಬಗ್ಗೆ ಕಾಳಜಿ ಇದ್ದರೆ ಪ್ರತಿದಿನ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಸಲಿ ಎಂದು ಸವಾಲು ಹಾಕಿದ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯನ್ನು ಬಿಜೆಪಿ ನಾಯಕರು ಸಮರ್ಪಕವಾಗಿ ಬಳಸಿಕೊಳ್ಳಲಿ ಎಂದು ಸಲಹೆ ನೀಡಿದರು.
ಪ್ರಶ್ನೆಗಳ ಸುರಿಮಳೆ..
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮೆಟ್ರೋ ಪ್ರಯಾಣವನ್ನು ಪ್ರಸ್ತಾಪಿಸಿ ಪ್ರಶ್ನೆಗಳ ಸುರಿಮಳೆಗೈದ ಸಚಿವರು, “ಪ್ರಶ್ನೆ ಇರೋದು ವಿಜಯೇಂದ್ರ ಅವರು ಮೆಟ್ರೋ ಹತ್ತುವಂತೆ ಮಾಡಿದ್ದು ಯಾರು? ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಮೆಟ್ರೋ ಹತ್ತುವ ಪರಿಸ್ಥಿತಿ ಯಾಕೆ ಬಂತು? ಅವರನ್ನು ಮೆಟ್ರೋ ಹತ್ತುವಂತೆ ಮಾಡಿದವರು ಯಾರು? ಇಂಧನ ದರ ಏರಿಕೆಯೇ ಇದಕ್ಕೆ ಕಾರಣ ಅಲ್ಲವೇ? ಇದಕ್ಕೆಲ್ಲಾ ಬಿಜೆಪಿ ನಾಯಕರು ಮೊದಲು ಉತ್ತರ ನೀಡಬೇಕಲ್ವಾ?” ಎಂದು ಖಾರವಾಗಿ ಪ್ರಶ್ನಿಸಿದರು.
ಇದನ್ನೂ ಓದಿ: ಇಂಧನ ಮಿತವ್ಯಯಕ್ಕೆ ಪಿಎಂ ಮೋದಿ ಕರೆ: ಕಾರು, ಬೆಂಗಾವಲು ಪಡೆ ಬಿಟ್ಟು ಮೆಟ್ರೋ ಹತ್ತಿದ ಬಿ.ವೈ. ವಿ