ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13 ಸಾವಿರ ಕೋಟಿ ನಾಮ ಎಳೆದಿರೋ ಬ್ಯಾಂಕ್ ವಂಚಕ ವಜ್ರದ ವ್ಯಾಪಾರಿ, ಮೆಹುಲ್ ಚೋಕ್ಸಿ ಹೆಸರನ್ನು ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಪಟ್ಟಿಯಿಂದ ತೆಗೆದು ಹಾಕಿದೆ.
ರೆಡ್ ಕಾರ್ನರ್ ನೋಟಿಸ್ ಪಟ್ಟಿಯಿಂದ ತಮ್ಮ ಹೆಸರು ತೆಗೆದು ಹಾಕುವಂತೆ ಚೋಕ್ಸಿ ಪರ ವಕೀಲರು ಫ್ರಾನ್ಸ್ನ ಲಿಯಾನ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆಗೆ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸೆ ಅವರ ಹೆಸರನ್ನು ಡೇಟಾಬೇಸ್ನಿಂದ ಕೈಬಿಡಲಾಗಿದೆ. ಇದರಿಂದಾಗಿ ಚೋಕ್ಸಿ ಯಾವುದೇ ದೇಶಕ್ಕೆ ಮುಕ್ತವಾಗಿ ಸಂಚರಿಸಬಹುದಾಗಿದೆ.
ಭಾರತ ಚೋಕ್ಸಿಯನ್ನೇಕೆ ಹುಡುಕುತ್ತಿದೆ?
ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿ ಮಾಲೀಕ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ಜಾರಿಯಾದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್ಗೆ ಭಾರತ ಮನವಿ ಮಾಡಿಕೊಂಡಿತ್ತು.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ಸಾಲ ಮರುಪಾವತಿಸದೆ 2018ರಿಂದ ಬಾರ್ಬಡೋಸ್ನ ಆಂಟಿಗುವಾದಲ್ಲಿ ಮೆಹುಲ್ ಚೋಕ್ಸಿ ತಲೆಮರೆಸಿಕೊಂಡಿದ್ದು ಭಾರತಕ್ಕೆ ಕರೆ ತರಲು ಸರ್ಕಾರ ಅಲ್ಲಿನ ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಸುತ್ತಿದೆ.
ಒಬ್ಬ ವ್ಯಕ್ತಿಯ ಮೇಲೆ ರೆಡ್ ಕಾರ್ನರ್ ನೋಟಿಸ್ ಜಾರಿಯಾದರೆ ಆರೋಪಿಗಳು ಯಾವುದೇ ದೇಶದಲ್ಲಿ ಅವಿತು ಕುಳಿತಿದ್ದರೂ ಬಂಧಿಸಬಹುದು. ರೆಡ್ ಕಾರ್ನರ್ ನೋಟಿಸ್ ಪಟ್ಟಿಯಿಂದ ಹೆಸರನ್ನು ತೆಗೆದ ಹಿನ್ನೆಲೆಯಲ್ಲಿ ಭಾರತವನ್ನು ಹೊರತುಪಡಿಸಿ ಮೆಹುಲ್ ಚೋಕ್ಸಿ ಯಾವುದೇ ದೇಶಕ್ಕೆ ಮುಕ್ತವಾಗಿ ಪ್ರಯಾಣಿಸಬಹುದಾಗಿದೆ