ಕೋರ್ಟ್ ಮೆಟ್ಟಿಲೇರಿದ್ದ ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾ ತಂಡಕ್ಕೆ ಶಾಕ್ ಉಂಟಾಗಿದೆ. ಬೆಳಗ್ಗೆ ನೀಡಿದ್ದ ತನ್ನದೇ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ (Madras High Court) ಮಧ್ಯಾಹ್ನ ತಡೆ ನೀಡಿದೆ.
ಎಲ್ಲವೂ ಅಂದುಕೊಂಡಂತೆ ಆಗುತ್ತಿದ್ದರೆ ‘ಜನ ನಾಯಗನ್’ ಸಿನಿಮಾ ಇಂದು ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್ಸಿ ಪ್ರಮಾಣ ಪತ್ರ ನಿರಾಕರಿಸಿ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸಿತ್ತು. ಇದಕ್ಕೆ ಆಕ್ಷೇಪಿಸಿ ‘ಜನ ನಾಯಗನ್’ ಸಿನಿಮಾದ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಇಂದು (ಜ.9) ವಿಚಾರಣೆ ನಡೆದಿದ್ದು, ಬೆಳಗ್ಗೆ ಮದ್ರಾಸ್ ಹೈಕೋರ್ಟ್ನ ಏಕಸದಸ್ಯ ಪೀಠ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವಂತೆ ಸಿಬಿಎಫ್ಸಿಗೆ ಆದೇಶಿಸಿತ್ತು. ಆದರೆ ಶಾಕ್ ಎಂಬಂತೆ ಮಧ್ಯಾಹ್ನದ ವೇಳೆಗೆ ತನ್ನದೇ ಆದೇಶಕ್ಕೆ ತಡೆ ನೀಡಿದ ಮದ್ರಾಸ್ ಹೈಕೋರ್ಟ್, ಪ್ರಮಾಣ ಪತ್ರ ನೀಡುವಿಕೆಗೆ ತಾತ್ಕಾಲಿಕ ತಡೆ ನೀಡಿದೆ.
ನಟ ವಿಜಯ್ ನಟಿಸಿರುವ ‘ಜನ ನಾಯಗನ್’ ಸಿನಿಮಾದಲ್ಲಿ ಸಾಕಷ್ಟು ರಾಜಕೀಯ ಅಂಶಗಳಿದ್ದು, ಇದೇ ಕಾರಣಕ್ಕೆ ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿದ್ದು, ಇದು ರಾಜಕೀಯ ನಡೆ ಎನ್ನಲಾಗುತ್ತಿದೆ. ಆದರೆ ನ್ಯಾಯಾಲಯವು ಮಧ್ಯ ಪ್ರವೇಶಿಸಿ, ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವಂತೆ ಮಾಡಿತ್ತು. ಆದರೆ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಮತ್ತೆ ಮರು ಆದೇಶ ಹೊರಡಿಸಿ, ಪ್ರಮಾಣ ಪತ್ರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಇದೆಲ್ಲ ಪ್ರಕ್ರಿಯೆಗಳು ವಿಜಯ್ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ಮೂಡಿಸಿದ್ದು, ವಿಜಯ್ ವಿರುದ್ಧ ರಾಜಕೀಯ ಕುತಂತ್ರದ ಭಾಗವಾಗಿ ಇದೆಲ್ಲ ನಡೆಯುತ್ತಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಿಲೀಸ್ಗೆ 2 ದಿನ ಬಾಕಿ ಇರೋವಾಗ್ಲೇ ಕೋರ್ಟ್ ಮೆಟ್ಟಿಲೇರಿದ ʼಜನ ನಾಯಗನ್ʼ ಸಿನಿಮಾ ಟೀಂ- ಯಾಕೆ..?
ಮದ್ರಾಸ್ ಹೈಕೋರ್ಟ್ನ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲಾಗಿದ್ದು, ‘ಸಿನಿಮಾದ ನಿರ್ಮಾಪಕರು, ಸಿನಿಮಾ ಬಿಡುಗಡೆಯ ಕಾರಣ ನೀಡಿ ನ್ಯಾಯಾಲಯದ ಮೇಲೆ ಒತ್ತಡ ಹೇರಿದ್ದರು. ಹಾಗಾಗಿ ಪ್ರಕರಣ ಸೂಕ್ತ ವಿಚಾರಣೆ ನಡೆದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದೀಗ ಪ್ರಕರಣದ ಮುಂದಿನ ವಿಚಾರಣೆಯನ್ನು ಇದೇ ತಿಂಗಳು 21ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಸಿನಿಮಾ ಬಿಡುಗಡೆ ಆಗುವುದು ಅಸಾಧ್ಯ ಎಂಬಂತಾಗಿದೆ.
ವಿಜಯ್ ವಿರುದ್ಧ ರಾಜಕೀಯ ಕುತಂತ್ರದ ಭಾಗವಾಗಿಯೇ ‘ಜನ ನಾಯಗನ್’ ಸಿನಿಮಾಕ್ಕೆ ಸಮಸ್ಯೆ ಕೊಡಲಾಗುತ್ತಿದೆ ಎನ್ನಲಾಗುತ್ತಿದೆ. ‘ಜನ ನಾಯಗನ್’ ಸಿನಿಮಾ ಮತ್ತು ಸಿಬಿಎಫ್ಸಿ ನಡೆಯುತ್ತಿರುವ ಈ ವಿವಾದ ಈಗಾಗಲೇ ರಾಜಕೀಯ ತಿರುವು ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷ ವಿಜಯ್ಗೆ ಬೆಂಬಲ ಸೂಚಿಸಿದ್ದು, ಒಂದು ಸಿನಿಮಾವನ್ನು ಹೀಗೆ ತಡೆಯುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದಿದೆ.