ಚಿಕ್ಕಬಳ್ಳಾಪುರ : ಕಾಡುಹಂದಿಗೆ ಹಾಕಲಾಗಿದ್ದ ಉರುಳಿಗೆ ಚಿರತೆ ಸಿಲುಕಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ (chikkaballapur) ತಾಲೂಕಿನ ಕೇತೇನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಸುಮಾರು ಮೂರು ವರ್ಷದ ಹೆಣ್ಣು ಚಿರತೆ (leopard) ಬಲೆಗೆ ಸಿಲುಕಿ ತೀವ್ರವಾಗಿ ಗಾಯಗೊಂಡು ಒದ್ದಾಡಿದ ಘಟನೆ ಬೆಳಕಿಗೆ ಬಂದಿದೆ.
ಕೇತೇನಹಳ್ಳಿ ಅರಣ್ಯದಲ್ಲಿ ಕಾಡುಹಂದಿ ಹಾಕಿದ್ದ ಬಲೆಗೆ ಚಿರತೆ ಸಿಲುಕಿ ಗಾಯಗೊಂಡಿರುವ ಮಾಹಿತಿ ದೊರಕುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಕೂಡಲೇ ಚಿರತೆಯನ್ನು ಉರುಳಿಯಿಂದ ಬಿಡುಗಡೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ಗಾಯಗಳ ತೀವ್ರತೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಚಿರತೆ ಸಾವನ್ನಪ್ಪಿದೆ.
ಘಟನೆಯ ಮಾಹಿತಿ ತಿಳಿದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದ್ದು, ಸರ್ಕಾರಿ ಮಾರ್ಗಸೂಚಿಗಳಂತೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೊಸಳೆ ಆಹಾರ ಕೇಸ್, ಹಂತಕನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್:
2012ರ ಮೇ 6 ರಂದು ದಾಂಡೇಲಿಯಲ್ಲಿ (Dandeli) ವಿಚಿತ್ರ ಘಟನೆಯೊಂದು ನೆಡೆದಿತ್ತು. ಆ ಘಟನೆ ಎಲ್ಲೆಡೆ ಭಾರೀ ಸದ್ದು ಮಾಡಿತ್ತು. ಹೌದು, ಮೇ ತಿಂಗಳಿನಲ್ಲಿ ಬೇಸಿಗೆ ರಜಾಕ್ಕಾಗಿ ಸಾಕಷ್ಟು ಜನ ಪ್ರವಾಸಕ್ಕೆ ಹೋಗುವುದು ಹೆಚ್ಚು..ಹೀಗೆ ಬಾಗಲಕೋಟೆಯಿಂದ ಪ್ರವಾಸಕ್ಕಾಗಿ ಒಂದಿಷ್ಟು ಜನ 2012ರ ಮೇ 6 ಕ್ಕೆ ದಾಂಡೇಲಿಗೆ ಹೋಗಿದ್ದರು.ಆ ವೇಳೆ ದಾಂಡೇಲಿ ಮೊಸಳೆ ಪಾರ್ಕ್ನಲ್ಲಿ ಪ್ರವಾಸಿಗರು ಮೊಸಳೆಗಳಿಗೆ ಮಾಂಸ ಹಾಕುತಿದ್ದರು. ಇದನ್ನು ಕಂಡ ಅರಣ್ಯ ಇಲಾಖೆಯ ಎಸಿಎಫ್ (ACF) ಆಗಿದ್ದ ಮದನ್ ನಾಯ್ಕ್ ಮೊಸಳೆಗೆ ಮಾಂಸ ಹಾಕಬಾರದು ಎಂದು ಸೂಚಿಸಿದ್ದರು.
ಆದ್ರೆ ಬಾಗಲಕೋಟೆಯಿಂದ ಬಂದ ಪ್ರವಾಸಿಗರು ಎಸಿಎಫ್ ಆಗಿದ್ದ ಮದನ್ ನಾಯ್ಕ್ ಮಾತನ್ನು ಕೇಳದೆ ಮತ್ತೆ ಮತ್ತೆ ಮೊಸಳೆಗೆ ಮಾಂಸ ಹಾಕುತ್ತಲೇ ಇದ್ದರು..ಈ ವಿಚಾರವಾಗಿ ಜಗಳವಾಗಿ ಪ್ರವಾಸಿಗರು ಎಸಿಎಫ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಎಸಿಎಫ್ ಮದನ್ ನಾಯ್ಕ್ ತಲೆಗೆ ಗಂಭೀರ ಗಾಯವಾಗಿತ್ತು.ಆ ಬಳಿಕ ಮೇ 8ರಂದು ಎಸಿಎಫ್ ಮೃತಪಟ್ಟಿದ್ದರು. ಈ ವಿಚಾರವಾಗಿ ಮಧನ್ ನಾಯ್ಕ್ ಪತ್ನಿ ಸುಮ ಹಲ್ಲೆ ಮಾಡಿದ ಪ್ರವಾಸಿಗರ ಮೇಲೆ ದೂರ ನೀಡಿದ್ದರು.
ಇದೀಗ 14 ವರ್ಷದ ಬಳಿಕ ಮದನ್ ಪತ್ನಿಗೆ ನ್ಯಾಯ ಸಿಕ್ಕಿದ್ದು, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಹತ್ಯೆ ಪ್ರಕರಣದ ಅಪರಾಧಿಗೆ ಯಲ್ಲಾಪುರ ಸಂಚಾರಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಶಾಂತ್ ರಾಮು ಲಂಬಾಣಿಗೆ 10 ವರ್ಷ ಜೈಲು ಶಿಕ್ಷೆಯ ಜೊತೆಗೆ 11,000 ರೂ. ದಂಡ ವಿಧಿಸಲಾಗಿದೆ ಹಾಗೂ ಆತನ ಜೊತೆ ಇದ್ದಂತಹ , ಆನಂದ್ ರೂಪಸಿಂಗ್ ನಾಯ್ಕ, ಸುರೇಶ್ ಶಂಕರಪ್ಪ ನಾಯ್ಕ, ಶೈಲಜಾ , ದಾನಾಬಾಯಿ, ಮಾದುರೀ ರಾಥೋಡ್, ರಾಧ ನಾಯ್ಕ ಇವರುಗಳಿಗೆ ತಲಾ ಒಂದು ಸಾವಿರ ರೂ. ದಂಡ ವಿಧಿಸಲಾಗಿದೆ.ಇನ್ನು ಎಸಿಎಫ್ ಕುಟುಂಬ ಅವಲಂಭಿತರಾದ ಪತ್ನಿ, ಪುತ್ರ, ಪುತ್ರಿಗೆ 50,000 ರೂ. ನೀಡುವಂತೆ ಕೋರ್ಟ್ ಆದೇಶ ನೀಡಿದೆ.
ಇದನ್ನೂ ಓದಿ: ನಕಲಿ ಖಾತೆಯಿಂದ ದುಡ್ಡಿಗಾಗಿ ಡಿಮ್ಯಾಂಡ್, ಡಿಸಿಪಿ ಹೆಸರಲ್ಲೇ ವಂಚನೆಗೆ ಯತ್ನ!