ನೆಲಮಂಗಲ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರು ನಾಳೆ ಪ್ರಮಾಣವಚನ (Oath) ಸ್ವೀಕರಿಸುತ್ತಿರುವುದಕ್ಕೆ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು (karnataka congress) ಮತ್ತು ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.
ಈ ಸಂಭ್ರಮವನ್ನು ಅತ್ಯಂತ ವಿಭಿನ್ನವಾಗಿ ಆಚರಿಸಲು ಮುಂದಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್. ಶ್ರೀನಿವಾಸ್ ಅವರು, ಇಡೀ ತಾಲೂಕಿನ ಜನತೆಗೆ ಬೃಹತ್ ಪ್ರಮಾಣದಲ್ಲಿ ಸಿಹಿ ಹಂಚಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಮನೆ ಮನೆಗೂ ತಲುಪಲಿದೆ ಲಾಡು!
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿರುವ ಅಪಾರ ಖುಷಿಯಲ್ಲಿ ನೆಲಮಂಗಲ ತಾಲೂಕಿನಾದ್ಯಂತ ಬರೋಬ್ಬರಿ 9 ರಿಂದ 10 ಲಕ್ಷ ಲಾಡುಗಳನ್ನು ಸಿದ್ಧಪಡಿಸಲಾಗುತ್ತಿದೆ. ತಾಲೂಕಿನ ಪ್ರತಿ ಹಳ್ಳಿ ಮತ್ತು ನಗರ ಪ್ರದೇಶದ ಸುಮಾರು 80 ರಿಂದ 90 ಸಾವಿರ ಮನೆಗಳಿದ್ದು, ಪ್ರತಿಯೊಂದು ಮನೆಮನೆಗೂ ತಲಾ ಒಂದು ಲಾಡು ಬಾಕ್ಸ್ ಅನ್ನು ಉಚಿತವಾಗಿ ಹಂಚಿಕೆ ಮಾಡಲು ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಲಾಡುಗಳನ್ನು ಅತ್ಯಂತ ರುಚಿಕರವಾಗಿ ಮತ್ತು ನಿಗದಿತ ಸಮಯದೊಳಗೆ ಸಿದ್ಧಪಡಿಸಲು ಸುಮಾರು 250 ರಿಂದ 300 ನುರಿತ ಬಾಣಸಿಗರು ಕೆಲಸ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಹಗಲಿರುಳು ನಿರಂತರವಾಗಿ ಶ್ರಮಿಸಿದ್ದಾರೆ.
ಸ್ವತಃ ನೆಲಮಂಗಲ ಶಾಸಕ ಶ್ರೀನಿವಾಸ್ ಅವರು ಲಾಡು ತಯಾರಿಕಾ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ, ಸಿಹಿಯ ಗುಣಮಟ್ಟ ಮತ್ತು ಪ್ಯಾಕಿಂಗ್ ಪ್ರಕ್ರಿಯೆಯನ್ನು ಅತ್ಯಂತ ಹತ್ತಿರದಿಂದ ವೀಕ್ಷಿಸಿ ಪರಿಶೀಲನೆ ನಡೆಸಿದ್ದಾರೆ.
ನಾಳೆ ಸಂಜೆ ಬೆಂಗಳೂರಿನ ಲೋಕಭವನದಲ್ಲಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿದ್ದಂತೆ, ಇತ್ತ ನೆಲಮಂಗಲದ ಪ್ರತಿಯೊಬ್ಬ ನಾಗರಿಕನ ಕೈಗೂ ಲಾಡು ಬಾಕ್ಸ್ ತಲುಪಲಿದ್ದು, ಇಡೀ ತಾಲೂಕಿನ ಜನತೆ ಸಿಹಿ ಸವಿಯುವ ಮೂಲಕ ಹೊಸ ಸರ್ಕಾರವನ್ನು ಸ್ವಾಗತಿಸಲಿದ್ದಾರೆ.
ಇದನ್ನೂ ಓದಿ : ನಾಳೆ ಸಿಎಂ ಆಗಿ ಡಿಕೆಶಿ ಪ್ರಮಾಣವಚನ ಕಾರ್ಯಕ್ರಮ – ಹೇಗಿದೆ ಭದ್ರತೆ?