ಮಾಜಿ ಸಿಎಂ ಹೆಚ್ಡಿಕೆ ತಮ್ಮ ತಂದೆ ಹೆಚ್ಡಿ ದೇವೇಗೌಡರ ಆರೋಗ್ಯದ ಸಮಸ್ಯೆ ಬಗ್ಗೆ ಭಾವುಕರಾಗಿದ್ದಾರೆ.
ಪಂಚರತ್ನ ರಥಯಾತ್ರೆ ವೇಳೆ ತಮ್ಮ ತಂದೆ ಹೆಚ್ ಡಿ ದೇವೇಗೌಡರ ಆರೋಗ್ಯದ ಬಗ್ಗೆ ಭಾವನಾತ್ಮಕ ಭಾಷಣ ಮಾಡಿದ ಹೆಚ್ಡಿಕೆ, ʼಹೆಚ್ಡಿ ದೇವೇಗೌಡರನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆರೋಗ್ಯದ ಸಮಸ್ಯೆಯಿಂದ ಹಲವು ಕಡೆಗೆ ಬರಲು ಅವರಿಗೆ ಸಾಧ್ಯವಾಗಿಲ್ಲʼ ಎಂದಿದ್ದಾರೆ.
“ನಾನು ಆಸ್ಪತ್ರೆಗೆ ಹೋಗಿದ್ದಾಗ ದೇವೇಗೌಡರಲ್ಲಿ ಶಪಥ ಮಾಡಿ ಬಂದಿದ್ದೇನೆ. ನೀವು 60 ವರ್ಷ ಸಾಧನೆ ಮಾಡಿದ್ದನ್ನು ಸಾಧಿಸಿ ತೋರಿಸುವವರೆಗೂ ನೀವು ಸಾಯಬಾರದೆಂದು ಶಪಥ ಮಾಡಿದ್ದೇನೆ. ನನ್ನ ಸಾಧನೆಯನ್ನು ನೋಡಿದ ದಿನ ಬೇಕಾದರೆ ನೀವು ಶಿವನ ಪಾದವನ್ನು ಸೇರಿಕೊಳ್ಳಿ, ಅಲ್ಲಿಯವರೆಗೂ ನೀವು ಸಾಯಬಾರದು ಎಂದು ಅವರ ಕೈ ಮುಟ್ಟಿ ಶಪಥ ಮಾಡಿದ್ದೇನೆ” ಎಂದು ಹೆಚ್ಡಿಕೆ ಭಾವುಕರಾಗಿದ್ದಾರೆ.
ಈ ಹಿಂದೆ, ರಾಮನಗರದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಹೆಚ್ಡಿಕೆ, “ದೇವೇಗೌಡರು ಮಣ್ಣಿಗೆ ಹೋಗೋದರೊಳಗೆ ಜೆಡಿಎಸ್ ಪಕ್ಷವನ್ನು ಸ್ವತಂತ್ರ್ಯವಾಗಿ ಅಧಿಕಾರಕ್ಕೆ ತರಬೇಕು ಎಂಬ ಆಸೆ ಅವರಿಗಿದೆ” ಎಂದು ಹೇಳಿದ್ದರು.