ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ (ks eshwarappa) ಅವರಿಗೆ ಮತ್ತೆ ವಿದೇಶದಿಂದ ಬೆದರಿಕೆ ಕರೆ ಬಂದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಅವರು ಶಿವಮೊಗ್ಗ (Shovamogga) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ನಿಖಿಲ್ ಅವರನ್ನು ಭೇಟಿಯಾಗಿ ಅಧಿಕೃತ ದೂರು ಸಲ್ಲಿಸಿದ್ದಾರೆ.
ದೂರ ಸಲ್ಲಿಕೆಯ ಬಳಿಕ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆಎಸ್ ಈಶ್ವರಪ್ಪ ಅವರು, ಈ ಹಿಂದೆ ನನಗೆ Y ಶ್ರೇಣಿಯ ಭದ್ರತೆ ನೀಡಲಾಗಿತ್ತು. ಆದರೆ ಸರ್ಕಾರ ಇದೀಗ ನನ್ನ ಭದ್ರತೆಯನ್ನು X ಶ್ರೇಣಿಗೆ ಇಳಿಸಿದೆ. ಈಗಲೂ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿದೆ. ಇದರಿಂದಾಗಿ ನನಗೆ ಮತ್ತೆ Y ಶ್ರೇಣಿಯ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಕೂಡ ನನಗೆ ವಿದೇಶಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಬಂದಿವೆ. ಈಗಲೂ ಅಂದರೆ ಜ.7ರಂದು ಮತ್ತೆ ನನಗೆ ವಿದೇಶದಿಂದ ಬೆದರಿಕೆ ಕರೆ ಬಂದಿತ್ತು. ಯಾವ ದೇಶದ್ರೋಹಿ ಸಂಘಟನೆಯವರು ಈ ಕರೆಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಎಸ್ಪಿಗೆ ಮನವಿ ಮಾಡಿದ್ದೇನೆ ಎಂದು ಈಶ್ವರಪ್ಪ ಹೇಳಿದರು.
ಹಲವು ಬಾರಿ ಬೆದರಿಕೆ ಕರೆ:
ಈ ಹಿಂದೆ ಕೆ.ಎಸ್. ಈಶ್ವರಪ್ಪ ಅವರಿಗೆ ಹಲವು ಬಾರಿ ಬೆದರಿಕೆ ಕರೆಗಳು ಬಂದಿತ್ತು. 2020 ಮತ್ತು 2023ರಲ್ಲಿಯೂ ವಿದೇಶಗಳಿಂದ ಬೆದರಿಕೆ ಕರೆಗಳು ಬಂದಿದ್ದವು. ಆ ಸಂದರ್ಭಗಳಲ್ಲಿ ಪಿಎಫ್ಐ ಕಾರ್ಯಕರ್ತರು ತನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಅವರು ಪೊಲೀಸ್ ಇಲಾಖೆಗೆ ದೂರು ನೀಡಿದ್ದರು. ಅಲ್ಲದೆ, 2024ರಲ್ಲಿ ತಮ್ಮ ಬೆಂಬಲಿಗರಿಗೂ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಶಿವಮೊಗ್ಗ ಎಸ್ಪಿಗೆ ಈಶ್ವರಪ್ಪ ದೂರು ಸಲ್ಲಿಸಿದ್ದರು.
ಜ. 7ರಂದು ವಿದೇಶದಿಂದ ಬಂದ ಈ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಅವರ ಭದ್ರತೆ ಕುರಿತ ಆತಂಕ ಮತ್ತೊಮ್ಮೆ ಹೆಚ್ಚಾಗಿದೆ. ಈ ಹಿಂದೆ ಕೂಡ ಬೆದರಿಕೆ ಕರೆಗಳ ಹಿನ್ನೆಲೆ ಈಶ್ವರಪ್ಪ ಅವರಿಗೆ ಪೊಲೀಸ್ ಭದ್ರತೆ ಹಾಗೂ ಎಸ್ಕಾರ್ಟ್ ವ್ಯವಸ್ಥೆ ಒದಗಿಸಲಾಗಿತ್ತು. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರವು ಅವರ ಎಸ್ಕಾರ್ಟ್ ಹಾಗೂ ಪೊಲೀಸ್ ಭದ್ರತೆಯನ್ನು ಹಿಂಪಡೆದಿತ್ತು.
ಇದನ್ನೂ ಓದಿ: “ಡಿಕೆಶಿ ಸುಲಭವಾಗಿ ಕೂರುವ ಹುಳ ಅಲ್ಲ” : ಕೆ.ಎಸ್ ಈಶ್ವರಪ್ಪ