ವಿಜಯಪುರ : ನಗರದ ಅಲ್-ಅಮೀನ್ ಮೆಡಿಕಲ್ ಕಾಲೇಜಿನ 2ನೇ ವರ್ಷದ ಎಂಬಿಬಿಎಸ್ ಕಾಶ್ಮೀರ ಮೂಲದ ವಿದ್ಯಾರ್ಥಿ ಹಮೀಮ್ ಎಂಬಾತನಿಗೆ ರ್ಯಾಗಿಂಗ್ ಮಾಡಿರುವ ಸೀನಿಯರ್ ವಿದ್ಯಾರ್ಥಿಗಳು ಭೀಕರ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಹಲ್ಲೆಗೊಳಗಾದ ಹಮೀಮ್ನ ಸ್ನೇಹಿತರು ಸೋಷಿಯಲ್ ಮೀಡಿಯಾ ‘X’ ಮೂಲಕ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
ಕ್ರಿಕೆಟ್ ಆಡುವಾಗ ಹೀಯಾಳಿಸಿದ ಸ್ಥಳೀಯರೂ ಆಗಿರುವ ಸೀನಿಯರ್ ವಿದ್ಯಾರ್ಥಿಗಳು ಹಮೀಮ್ಗೆ ಹಾಡು ಹೇಳು, ಡ್ಯಾನ್ಸ್ ಮಾಡು ಅಂತಾ ಒತ್ತಾಯ ಮಾಡಿದ್ದಾರಂತೆ. ಇದನ್ನು ವಿರೋಧಿಸಿದ್ದಕ್ಕೆ ಹಾಸ್ಟೆಲ್ ರೂಂಗೂ ತೆರಳಿ ಮತ್ತೆ ಹಲ್ಲೆ ಮಾಡಿದ್ದಲ್ಲದೇ, ವಿಡಿಯೋ ಕೂಡ ಮಾಡಲೆತ್ನಿಸಿದ್ದಾರಂತೆ. ಇದಕ್ಕೆ ವಿರೋಧಿಸಿದಕ್ಕೆ, ನಾವು ಇಲ್ಲೇ ಲೋಕಲ್.. ನಿಂಗೆ ಹೆಂಗೆ ಹೊಡಿತ್ತೀವಿ ಅಂತಾ ಊಹಿಸಲು ಆಗಲ್ಲ ನೋಡು ಎಂದು ಬೆದರಿಸಿ ಥಳಿಸಿದ್ದಾರೆಂಬ ಆರೋಪವಿದೆ.
ಸದ್ಯ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು, ಈ ಕುರಿತು ಜಮ್ಮು & ಕಾಶ್ಮೀರ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಸಂಚಾಲಕ ನಾಸಿರ್ ಖುಯೇಹಾಮಿ ಖಂಡಿಸಿದ್ದಾರೆ. ಸಂತ್ರಸ್ತನಿಗೆ ನ್ಯಾಯ ದೊರಕಿಸಿಕೊಡುವಂತೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಹಲ್ಲೆ ಮಾಡಿದವರನ್ನು ಬಂಧಿಸಿ ಕಠಿಣ ಕ್ರಮಕ್ಕೆ ಆಗ್ರಹಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.