ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ರಾಜ್ಯಾದ್ಯಂತ ಪೊಲೀಸರು ಹಾಗೂ ಚುನಾವಣಾ ಆಯೋಗ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿದೆ. ಈ ದಿಸೆಯಲ್ಲಿ ಹಲವೆಡೆ ಯಾವುದೇ ದಾಖಲೆಯಿಲ್ಲದೇ ಸಾಗಿಸಲಾಗುತ್ತಿದ್ದ ಭಾರೀ ಮೊತ್ತದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ, ಧಾರವಾಡ, ವಿಜಯಪುರ, ಕಲಬುರಗಿ ಮತ್ತು ರಾಯಚೂರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಲಕ್ಷಾಂತರ ರೂ. ಹಣ ಪೊಲೀಸರ ವಶವಾಗಿದೆ.
ಬೆಳಗಾವಿಯಲ್ಲಿ ಪ್ರತ್ಯೇಕ ಐದು ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ನಡೆಸಿದ ಪೊಲೀಸರು ಅಲ್ಲೂ ಸಹ ಅಕ್ರಮವಾಗಿ ಸಾಗಿಸಲ್ಪಡುತ್ತಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಹಾರೋಗೇರಿ- 4 ಲಕ್ಷ ರೂ. ತೆಲಸಂಗ -3.45 ಲಕ್ಷ ರೂ., ಆಲೂರ-1.9 ಲಕ್ಷ ರೂ., ಪೀರನವಾಡಿ-2.89 ಲಕ್ಷ ರೂ., ಹಾಗೂ ಪೋರ್ಟ್ ರೋಡ್ ಚೆಕ್ಪೋಸ್ಟ್ನಲ್ಲಿ 13 ಲಕ್ಷ ರೂ., ವಶಪಡಿಸಿಕೊಳ್ಳಲಾಗಿದೆ.
ಧಾರವಾಡದ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹುಬ್ಬಳ್ಳಿಗೆ ಸಾಗಿಸಲಾಗುತ್ತಿದ್ದ 53 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಂಜು ಹಿರೇಮಠ ಎಂಬ ವ್ಯಕ್ತಿ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ವಿಜಯಪುರದ ಕೊಂಕಣಗಾಂವ್ ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 4.40 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದು, ಅನಿಲ್ ಕುಮಾರ್ ರಾಥೋಡ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಕಲಬುರಗಿಯ ಜೇವರ್ಗಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅರುಣ್ ಕುಮಾರ್ ಎಂಬಾತನ ವಾಹನದ ಮೇಲೆ ದಾಳಿ ನಡೆಸಿ ಯಾವುದೇ ದಾಖಲೆಯಿಲ್ಲದ 4 ಲಕ್ಷ ರೂ. ಹಣ ಮತ್ತು 16 ಕೆ.ಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ತೆಲಂಗಾಣದ ಮೂಲಕ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಾಗಿಸಲು ಪ್ರಯತ್ನಿಸುತ್ತಿದ್ದ ವಾಹನವೊಂದನ್ನು ವಶಕ್ಕೆ ಪಡೆದು 3 ಲಕ್ಷ ರೂ. ಜಪ್ತಿ ಮಾಡಲಾಗಿದೆ.