ಎಪ್ರಿಲ್ ತಿಂಗಳ ಆರಂಭದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರಾದರೂ ಇನ್ನೂ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಫೈನಲ್ ಆಗಿಲ್ಲ. ಅಭ್ಯರ್ಥಿಗಳನ್ನು ನಿರ್ಧರಿಸಲು ಮಾರ್ಚ್ 31 ರಂದು 224 ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಿದೆ ಎಂದು ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ವಲಸಿಗ ಹಾಗೂ ಮೂಲ ಬಿಜೆಪಿಗರಲ್ಲಿ ಇರುವ ವೈಮನಸ್ಸು ಹಾಗೂ ಕಿತ್ತಾಟದ ಹಿನ್ನೆಲೆಯಲ್ಲಿ ಬಿಜೆಪಿಗೆ ಟಿಕೆಟ್ ಫೈನಲ್ ಮಾಡಲು ತೊಡಕಾಗಿದೆ. ಸಮೀಕ್ಷೆಗಳೂ ಬಿಜೆಪಿ ವಿರುದ್ಧ ಇರುವುದರಿಂದ ಭಾರೀ ಜಾಗರೂಕತೆಯನ್ನು ಕೇಸರಿ ಪಕ್ಷ ಮಾಡುತ್ತಿದೆ.
ಸರ್ಕಾರ ರಚನೆಗೆ ಕಾರಣಕರ್ತರಾದ ವಲಸಿಗ ನಾಯಕರುಗಳನ್ನು ಬಿಟ್ಟರೆ ಅವರು ತಿರುಗಿ ಬೀಳು ಎಲ್ಲಾ ಸಾಧ್ಯತೆ ಇದ್ದು, ಈಗಾಗಲೇ ವಲಸಿಗ ಸಚಿವರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎನ್ನುವ ಮಾತುಗಳು ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದೆ.
ಅಲ್ಲದೆ, ಮೂಲ ಬಿಜೆಪಿಗರೂ ಟಿಕೆಟ್ಗಾಗಿ ನಿರೀಕ್ಷೆಯನ್ನಿಟ್ಟು ಕೊಂಡಿದ್ದು, ವಲಸಿಗರಿಗೆ ಮತ್ತೆ ಮತ್ತೆ ಮಣೆ ಹಾಕುವುದರಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೂ ಅಸಮಾಧಾನ ಇದೆ. ವಲಸಿಗರಲ್ಲಿ ಹಿಂದುತ್ವದ ಸ್ಪಿರಿಟ್, ಸಂಘನಿಷ್ಠೆ ಅಷ್ಟೇನೂ ಇಲ್ಲದಿರುವುದು ಕೂಡಾ ಆರ್ಎಸ್ಎಸ್ ಹಿನ್ನೆಲೆಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
2024 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಬಿಜೆಪಿಗೆ ಪ್ರಮುಖವಾಗಿದ್ದು, ಗೆಲ್ಲಲೇಬೇಕಾದ ಒತ್ತಡ ಜೋರಾಗಿಯೇ ಇದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದು, ಭಿನ್ನಮತೀಯರ ಬಂಡಾಯ ಪಕ್ಷಕ್ಕೆ ಡ್ಯಾಮೇಜ್ ಆಗಬಾರದೆಂಬ ಆಲೋಚನೆಯಲ್ಲಿ ಬಿಜೆಪಿ ಇದೆ.