Wednesday, May 14, 2025
Homeಟಾಪ್ ನ್ಯೂಸ್Kannada Rajyotsava 2024: ರಾಜ್ಯೋತ್ಸವ ಆಚರಣೆ, ಇತಿಹಾಸ, ಮಹತ್ವದ ಮಾಹಿತಿ ಇಲ್ಲಿದೆ...

Kannada Rajyotsava 2024: ರಾಜ್ಯೋತ್ಸವ ಆಚರಣೆ, ಇತಿಹಾಸ, ಮಹತ್ವದ ಮಾಹಿತಿ ಇಲ್ಲಿದೆ…

ಕನ್ನಡದ ಕಂಪನ್ನು ಪಸರಿಸುವ ಕನ್ನಡ ರಾಜ್ಯೋತ್ಸವ   ನವೆಂಬರ್‌ 1ರಂದು ನಡೆಯಲಿದೆ. ಶಾಲೆ, ಕಾಲೇಜುಗಳಲ್ಲಿ, ಸಂಘಸಂಸ್ಥೆಗಳಲ್ಲಿ, ಸರಕಾರಿ ಕಚೇರಿಗಲ್ಲಿ ಸೇರಿದಂತೆ ನಾಡಿನ ಮೂಲೆಮೂಲೆಗಳಲ್ಲಿಯೂ ಕನ್ನಡ ಹಬ್ಬದ ಸಂಭ್ರಮವಿರಲಿದೆ. ಕನ್ನಡದ ಕಂಪನ್ನು ಪಸರಿಸುವ ಈ ದಿನದ ಕುರಿತು ಕನ್ನಡಿಗರಾದ ನಾವು ಈ ದಿನದ ಇತಿಹಾಸ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ಆರಂಭ ಆಗಿದ್ದು ಹೇಗೆ…?

ಮೈಸೂರು ರಾಜ್ಯವು (ಈಗಿನ ಕರ್ನಾಟಕ ) 1956ರ ನವೆಂಬರ್‌ 1ರಂದು ನಿರ್ಮಾಣವಾಯಿತು. ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಹಾಗೂ ಮದ್ರಾಸ್‌ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿದ್ದ ಕನ್ನಡ ನಾಡು ಈ ದಿನ ರಾಜಕೀಯವಾಗಿ ಒಂದಾಯಿತು. ದಕ್ಷಿಣ ಭಾರತದ ಕನ್ನಡ ಭಾಷೆ ಮಾತನಾಡುವ ಎಲ್ಲ ಪ್ರದೇಶಗಳನ್ನು ವಿಲೀನಗೊಲೀಸಿ ಒಂದು ರಾಜ್ಯವಾಗಿ ಘೋಷಣೆ ಮಾಡಿದ ಈ ದಿನವನ್ನು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.

 

ಇತಿಹಾಸ ಏನೇಳುತ್ತದೆ..?

ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್‌, ಕರ್ನಾಟಕ ಏಕೀಕರಣ ಚಳುವಳಿಯನ್ನು 1905 ರಲ್ಲಿ ಪ್ರಾರಂಭಿಸಿದರು. 1950ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪು ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.

 

1956 ರ ನವೆಂಬರ್‌ 1 ರಂದು, ಮದ್ರಾಸ್‌, ಮುಂಬಯಿ, ಹೈದರಬಾದ್‌ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.

 

ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್‌ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು ಮೈಸೂರು ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್‌ 1, 1973 ರಂದು ಕರ್ನಾಟಕ ಎಂದು ಬದಲಾಯಿತು.

ಈ ಸಂದರ್ಭದಲ್ಲಿ ದೇವರಾಜ ಅರಸ್‌ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ ಅನಕೃ, ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌, ಎ.ಎನ್‌ . ಕೃಷ್ಣರಾವ್‌ ಮತ್ತು ಬಿ.ಎಂ. ಶ್ರೀಕಂಠಯ್ಯ .

ಆಚರಣೆ ಹೇಗೆ ?

ಕನ್ನಡಿಗರ ಸ್ಫೂರ್ತಿಯ ಸಂಕೇತವಾಗಿರುವ ‘ಹಳದಿ-ಕೆಂಪು’ ಬಣ್ಣದ ಬಾವುಟವನ್ನು ರಾಜ್ಯದ ಎಲ್ಲೆಡೆ ಹಾರಿಸಲಾಗುತ್ತದೆ. ಕನ್ನಡ ನಾಡಗೀತೆ (ಜಯಭಾರತ ಜನನಿಯ ತನುಜಾತೆ )ಯನ್ನು ಹಾಡಲಾಗುತ್ತದೆ. ಸರಕಾರಿ ಕಚೇರಿ ಮತ್ತು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ. ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವಾರು ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಯುವಕ ಮಂಡಲ, ಯುವ ಜನರ ಸಂಘಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯೋತ್ಸವ ಆಚರಿಸುತ್ತವೆ.

ಹೆಚ್ಚಿನ ಸುದ್ದಿ

error: Content is protected !!