ತೆಲಂಗಾಣ : ಜೀವನದ ಪ್ರತಿ ಹಂತದಲ್ಲೂ, ಕಷ್ಟ-ಸುಖ ಏನೇ ಬಂದರೂ ಬದುಕಿನುದ್ದಕ್ಕೂ ಜೊತೆಯಾಗಿರುತ್ತೇನೆ ಎಂದು ಸಪ್ತಪದಿ ತುಳಿಯುವ ಪತಿ-ಪತ್ನಿಯರು ಆ ನಂತರ ಹಾಗೆಯೇ ಜೀವನ ಸಾಗಿಸುವವರು ಎಷ್ಟು ಮಂದಿ ..? ಹೀಗೆ ಪತಿಯ ಕಷ್ಟ, ಸುಖದಲ್ಲಿ ಜೊತೆಗಿರಬೇಕಿದ್ದ ಪತ್ನಿ ತನ್ನ ಗಂಡನ ಅನಾರೋಗ್ಯ ಸಮಸ್ಯೆಯಿಂದ ಬೇಸತ್ತು ಅಳಿಯನ ಜೊತೆ ಸೇರಿ ಪತಿಯನ್ನೇ ಕೊಲೆಗೈದಿದ್ದಾಳೆ.
ಈ ಘಟನೆ ತೆಲಂಗಾಣದ ಮೇಡಕ್ ಎಂಬ ಪ್ರದೇಶದಲ್ಲಿ ನಡೆದಿದೆ. ಹೊಲದ ಕೆಲಸಕ್ಕೆ ತೆರಳಿದ್ದ ವೇಳೆ ಪತಿ ಆಶಯ್ಯ (45) ಆಯತಪ್ಪಿ ಬಿದ್ದು ಸೊಂಟ ಮುರಿದುಕೊಂಡಿದ್ದ. ಹೀಗಾಗಿ ಆತನಿಗೆ ಶಸ್ತ್ರಚಿಕಿತ್ಸೆ ಮಾಡಬೇಕು, ಅದಕ್ಕಾಗಿ ಬಹಳ ಹಣ ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದರು ಎನ್ನಲಾಗಿದೆ.
ಆದ್ರೆ ಅಷ್ಟೊಂದು ಹಣ ಇಲ್ಲಿಂದ ಹೊಂದಿಸುವುದು ಎಂದು ತಿಳಿಯದೆ ಕಂಗಾಲಾದ ಪತ್ನಿ ಶಿವಮ್ಮ ಕೊನೆಗೆ ಗಂಡನನ್ನೇ ಮುಗಿಸುವ ನಿರ್ಧಾರಕ್ಕೆ ಬಂದಿದ್ದಾಳೆ. ಆದ್ರೆ ಆತನ ಅಂತ್ಯಕ್ರಿಯೆ ವೇಳೆ ಮೃತದೇಹದ ಕುತ್ತಿಗೆ ಭಾಗದಲ್ಲಿ ಗಾಯಗಳನ್ನು ಕಂಡ ಸಂಬಂಧಿಕರು ಅನುಮಾನಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.