ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನಗಳ ನಡುವೆ, ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಜಯನ್ ಮೆಹ್ತಾ ಅವರು ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕದ ಮಾರುಕಟ್ಟೆಗೆ ಅಮುಲ್ ಪ್ರವೇಶವು ನಂದಿನಿಯೊಂದಿಗೆ ಸ್ಪರ್ಧಿಸಲು ಅಲ್ಲ ಬದಲಾಗಿ ಒಟ್ಟಿಗೆ ಕೆಲಸ ಮಾಡಲು ಎಂದು ಹೇಳಿದ್ದಾರೆ.
ರಾಜ್ಯ ರೈತರ ಹೆಮ್ಮೆಯಾದ ನಂದಿನಿಯನ್ನು ಮೂಲೆಗುಂಪು ಮಾಡಲು ಅಮೂಲ್ ಅನ್ನು ರಾಜ್ಯ ಮಾರುಕಟ್ಟೆಯಲ್ಲಿ ವಿಸ್ತರಿಸಲಾಗುತ್ತಿದೆ. ಅದಕ್ಕಾಗಿ ನಂದಿನಿಯ ಪ್ರಾಡಕ್ಟ್ಗಳಲ್ಲಿ ಕೃತಕ ಕೊರತೆ ಬರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ಅಮೂಲ್ ಎಂಡಿ ಪ್ರತಿಕ್ರಿಯೆ ನೀಡಿಸದ್ದಾರೆ.
“ಇದು ಅಮುಲ್ vs ನಂದಿನಿ ಅಲ್ಲ. ಬದಲಾಗಿ ಅಮುಲ್ ಮತ್ತು ನಂದಿನಿ. ಇವೆರಡೂ ಒಂದೇ ರೀತಿಯ ಹಿತಾಸಕ್ತಿಗಳ ಮೇಲೆ ಕೆಲಸ ಮಾಡುವ ರೈತ ಒಡೆತನದ ಸಹಕಾರಿಗಳಾಗಿವೆ. ನಾವಿಲ್ಲಿ ನಂದಿನಿಯೊಂದಿಗೆ ಸ್ಪರ್ಧಿಸಲು ಬಂದಿಲ್ಲ” ಎಂದು ಜಯನ್ ಮೆಹ್ತಾ ಹೇಳಿದ್ದಾರೆ.
“ನಮ್ಮನ್ನು ವಿರೋಧಿಸುವವರು ಕೂಡ ನಮ್ಮ ಗ್ರಾಹಕರು. ಅವರು ತಮ್ಮ ಅನಿಸಿಕೆ ಹೇಳಲು ಸ್ವತಂತ್ರರು. ಆದರೆ ನಂದಿನಿ ಮತ್ತು ಅಮುಲ್ ನಡುವಿನ ಉತ್ತಮ ಸಂಬಂಧವನ್ನು ಯಾವುದೂ ಬದಲಾಯಿಸುವುದಿಲ್ಲ. ನಾವು ನಂದಿನಿಯೊಂದಿಗೆ ಹಲವಾರು ಕಡೆ ನಿಕಟವಾಗಿ ಕೆಲಸ ಮಾಡುತ್ತೇವೆ. ಕಳೆದ ಒಂದು ದಶಕದಿಂದ ಬೆಂಗಳೂರಿನ ಮದರ್ ಡೈರಿ ಪ್ಲಾಂಟ್ನಲ್ಲಿ ನಂದಿನಿ ಹಾಲನ್ನು ಬಳಸಿ ಅಮುಲ್ ಐಸ್ ಕ್ರೀಂ ಪ್ಯಾಕ್ ಮಾಡುತ್ತಿದ್ದೇವೆ. ನಮಗೆ ಚೀಸ್ನ ಕೊರತೆ ಇದ್ದಾಗ, ಅವರಲ್ಲಿ ಹೆಚ್ಚುವರಿಯಾಗಿದ್ದಾಗ ನಾವು ನಂದಿನಿಯಿಂದ ಚೀಸ್ ಖರೀದಿಸಿದ್ದೇವೆ” ಎಂದು ಮೆಹ್ತಾ ಹೇಳಿದ್ದಾರೆ.