ನವದೆಹಲಿ: ಟ್ರಂಪ್ ನೇತೃತ್ವದ ಶಾಂತಿ ಯೋಜನೆಯ ಮುಂದಿನ ಹಂತಕ್ಕಾಗಿ ಗಾಜಾಗೆ (Gaza Strip) ಸಂಭಾವ್ಯ ಅಂತರರಾಷ್ಟ್ರೀಯ ಸ್ಥಿರೀಕರಣ ಪಡೆಯಲ್ಲಿ (ISF) ಪಾಕಿಸ್ತಾನಿ (Pakistan) ಸೈನಿಕರನ್ನು ಒಳಗೊಳ್ಳುವ ಪ್ರಸ್ತಾಪವನ್ನು ಭಾರತದಲ್ಲಿನ ಇಸ್ರೇಲ್ (Israel) ರಾಯಭಾರಿ ತಿರಸ್ಕರಿಸಿದ್ದಾರೆ.
ಭಾರತದ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಖಾಸಗಿ ಮಾಧ್ಯಮವೊಂದರ ಸಂದರ್ಶನದ ವೇಳೆ ಈ ಹೇಳಿಕೆ ನೀಡಿದ್ದಾರೆ. ಗಾಜಾ ಶಾಂತಿ ಯೋಜನೆಯ ಮುಂದಿನ ಹಂತವಾದ ಐಎಸ್ಎಫ್ ನಲ್ಲಿ ಪಾಕಿಸ್ತಾನದ ಭಾಗವಹಿಸುವಿಕೆಯ ಕಲ್ಪನೆಯನ್ನು ನಾವು ಸಮ್ಮತಿಸುವುದಿಲ್ಲ ಹಾಗೂ ಇಸ್ರೇಲ್ ತಾವು ನಂಬುವ ದೇಶಗಳೊಂದಿಗೆ ಮಾತ್ರವೇ ಕೆಲಸ ಮಾಡಲು ಬಯಸುವುದಾಗಿ ಹೇಳಿದ್ದಾರೆ.
ಹಮಾಸ್ ಮತ್ತು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದಂತಹ ಭಯೋತ್ಪಾದಕ ಗುಂಪುಗಳ ನಡುವಿನ ಸಂಬಂಧದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಶಾಂತಿ ಯೋಜನೆಯ ಮುಂದಿನ ಹಂತಕ್ಕಾಗಿ ಹಮಾಸ್ ಅನ್ನು ನಿರ್ಮೂಲನೆ ಮಾಡುವುದು ನಿರ್ಣಾಯಕವಾಗಿದೆ ಎಂದು ಹೇಳಿದರು. ನಾವು ಮುಂದುವರಿಯಬಹುದಾದ ಪರಿಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಅದಕ್ಕಾಗಿ ಹಮಾಸ್ ಅನ್ನು ಮೊಲದು ಕಿತ್ತೊಗೆಯಬೇಕು. ಅದು ಆಗದೇ ಹೋದರೆ ಮುಂದಿನ ಹಂತ ತಲುಪಲು ಸಾಧ್ಯವಿಲ್ಲ ಎಂದು ಅಜರ್ ಹೇಳಿದರು.
ಹಮಾಸ್ ವಿರುದ್ಧ ಹೋರಾಡಲು ಬಯಸದ ಕಾರಣ ಹಲವಾರು ದೇಶಗಳು ತಮ್ಮ ಸೈನ್ಯವನ್ನು ಕಳುಹಿಸಲು ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿವೆ. ಇದರಿಂದಾಗಿ ಪ್ರಸ್ತುತ ಸಂದರ್ಭಗಳಲ್ಲಿ ಸ್ಥಿರೀಕರಣ ಪಡೆ ಕಾರ್ಯನಿರ್ವಹಿಸುವುದಿಲ್ಲ ಎಂದು ಅವರು ಹೇಳಿದರು. ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದರಿಂದ ಗಾಜಾದಲ್ಲಿ ಪಾಕಿಸ್ತಾನ ಸೇನೆಯ ಪಾತ್ರವನ್ನು ಇಸ್ರೇಲ್ ಒಪ್ಪುತ್ತದೆಯೇ ಎಂದು ಕೇಳಿದಾಗ ಅಜರ್ ಇಲ್ಲ ಎಂದು ಉತ್ತರಿಸಿದ್ದಾರೆ.
ಇಸ್ರೇಲ್ನ ಪ್ರಮುಖ ಆದ್ಯತೆಗಳಲ್ಲಿ, ಒತ್ತೆಯಾಳುಗಳು ಮತ್ತು ಮೃತ ಒತ್ತೆಯಾಳುಗಳ ದೇಹಗಳನ್ನು ಹಿಂಪಡೆಯುವುದು ಮತ್ತು ಹಮಾಸ್ನ ಮಿಲಿಟರಿ ಮತ್ತು ರಾಜಕೀಯ ಮೂಲಸೌಕರ್ಯಗಳನ್ನು ಕಿತ್ತುಹಾಕುವುದು ಸೇರಿವೆ ಎಂದು ಅಜರ್ ಹೇಳಿದರು.
ಟ್ರಂಪ್ರ ಶಾಂತಿ ಯೋಜನೆಯನ್ನು ಮುಂದುವರಿಸಲು ಹಮಾಸ್ ರಾಜತಾಂತ್ರಿಕ ಒತ್ತಡಕ್ಕೆ ಮಣಿಯದಿದ್ದರೆ, ಇಸ್ರೇಲ್ ತನ್ನದೇ ಆದ ಕ್ರಮದ ಮೇಲೆ ಕಾರ್ಯನಿರ್ವಹಿಸಲಿದೆ. ಅದು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಒಂದೋ ಹಮಾಸ್ ಸರ್ವನಾಶ ಆಗುತ್ತದೆ, ಇಲ್ಲದಿದ್ದರೆ ಯಾವುದೇ ಯೋಜನೆಯ ಎರಡನೇ ಹಂತವನ್ನು ಕಾರ್ಯಗತಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ಇದನ್ನೂ ಓದಿ : ವೆನೆಜುವೆಲಾದ ತೈಲ ಭಾರತಕ್ಕೆ ಮಾರಾಟ – ಅಮೆರಿಕದ ಮುಂದಾಳತ್ವ!