ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆಯಬೇಕಿದ್ದ 2026ರ ಐಪಿಎಲ್ (ipl 2026) ಮಹಾಸಮರಕ್ಕೆ ಈಗ ಟಿಕೆಟ್ ಹಂಚಿಕೆಯ ವಿವಾದ ಅಡ್ಡಗಾಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ಫೈನಲ್ ಪಂದ್ಯ ನಡೆಸಲು ಉದ್ದೇಶಿಸಲಾಗಿತ್ತಾದರೂ, ಸ್ಥಳೀಯ ಜನಪ್ರತಿನಿಧಿಗಳ ಹಠಾತ್ ಬೇಡಿಕೆಗಳು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿವೆ.
ಹೌದು,ಶಾಸಕರಿಗೆ ಪ್ರತ್ಯೇಕ ವಿಐಪಿ ಪಾಸ್ಗಳಿಗಾಗಿ ವಿಧಾನಸಭೆಯಲ್ಲಿ ನಡೆದ ಚರ್ಚೆ ಮತ್ತು ಒತ್ತಡಗಳು ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಕಿರಿಕಿರಿ ಉಂಟುಮಾಡಿದೆ. ಹೀಗೆ ರಾಜಕೀಯ ಹಸ್ತಕ್ಷೇಪದಿಂದ ಬೇಸತ್ತಿರುವ ಮಂಡಳಿ ಪಂದ್ಯದ ಪಾರದರ್ಶಕತೆ ಕಾಪಾಡಲು ಈಗ ಪರ್ಯಾಯ ತಾಣಗಳತ್ತ ದೃಷ್ಟಿ ನೆಟ್ಟಿದೆ. ಬೆಂಗಳೂರಿನಲ್ಲಿ ಈ ಗೊಂದಲ ಮುಂದುವರಿದರೆ ಅಂತಿಮ ಪಂದ್ಯವನ್ನು ಪಂಜಾಬ್ ಅಥವಾ ಅಹಮದಾಬಾದ್ಗೆ ವರ್ಗಾಯಿಸುವ ಸಾಧ್ಯತೆಯಿದೆ.
ಈ ಬೆಳವಣಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಬೇಸರ ತರಿಸಿದ್ದು, ತವರು ನೆಲದಲ್ಲಿ ಐಪಿಎಲ್ ಫೈನಲ್ ಪಂದ್ಯ ನೋಡುವ ಆಸೆಗೆ ತಣ್ಣೀರು ಎರಚಿದಂತಾಗಿದೆ. ಈ ಸಂಬಂಧ ಮುಂದಿನ ಮೂರು ದಿನಗಳಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.