ಇರಾನ್: ಇರಾನ್ನಲ್ಲಿ(Iran) ದೇಶವ್ಯಾಪಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಇಂಟರ್ನೆಟ್ ಸೇವೆ(Internet blackout) ಸ್ಥಗಿತಗೊಂಡಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಸ್ಥಗಿತಗೊಳಿಸಲಾಯಿತು. ಪ್ರತಿಭಟನೆಗಳು ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಇಂಟರ್ನೆಟ್ ಮತ್ತು ಫೋನ್ ಸೇವೆಗಳನ್ನು ಕಡಿತಗೊಳಿಸಲಾಯಿತು.
ಇರಾನ್ ನಲ್ಲಿ ಮಾಧ್ಯಮಗಳ ಮೇಲೆ ನಿಷೇಧವನ್ನು ಹೇರಿದ್ದು, ಇರಾನಿ ಸರ್ಕಾರಿ ಮಾಧ್ಯಮಗಳು ಸೀಮಿತ ಪ್ರಸಾರವನ್ನು ನೀಡುತ್ತಿವೆ. ಅಲ್ಲದೆ, ದೇಶಿಯ ಹಾಗೂ ವಿದೇಶಿ ಪತ್ರಕರ್ತರು ನಿರ್ಬಂಧಗಳು ಮತ್ತು ಬಂಧನದ ಅಪಾಯವನ್ನು ಎದುರಿಸುತ್ತಿದ್ದಾರೆ.
ಅಮೆರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಂದ ನಿರ್ಬಂಧ ಎದುರಿಸುತ್ತಿರುವ ಇರಾನ್ ಈಗ ಅಮೆರಿಕಾದ ಡಾಲರ್ ಎದುರು ತನ್ನ ಕರೆನ್ಸಿ ರಿಯಾಲ್ ಪಾತಾಳಕ್ಕೆ ಕುಸಿದಿದ್ದು, ದೇಶದಲ್ಲಿ ಹಣದುಬ್ಬರ ಸೇರಿದಂತೆ ಆರ್ಥಿಕತೆ ಕುಸಿತಗೊಂಡಿದ್ದು, ಇದರಿಂದ ದಿನದೂಡುವದಕ್ಕು ಕಷ್ಟಪಡುವಂತ ಸ್ಥಿತಿಗೆ ತಲುಪಿದ್ದು, ಇರಾನ್ ಜನತೆಯ ಆಕ್ರೋಶದ ಕಟ್ಟೆ ಒಡೆದು ಬೀದಿಗಿಳಿದು ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದೆ.
ಯುವರಾಜ ರೆಜಾ ಪಹ್ಲವಿ ಅವರು ಸಾಮೂಹಿಕ ಪ್ರತಿಭಟನೆಗೆ ಕರೆ ನೀಡಿದ ನಂತರ ಟೆಹ್ರಾನ್ ಮತ್ತು ಇತರ ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದರು. ನಂತರ ಗುರುವಾರ ತಡರಾತ್ರಿ ಇರಾನ್ನಾದ್ಯಂತ ಇಂಟರ್ನೆಟ್ ಸಂಪರ್ಕ ಮತ್ತು ದೂರವಾಣಿ ಕರೆಗಳನ್ನು ನಿರ್ಬಂದಿಸಲಾಯಿತು.
ಇದನ್ನು ತಡೆಯಲು ಕಠಿಣ ಮಾರ್ಗವನ್ನು ಖಮೇನಿ ಸರ್ಕಾರ ಅನುಸರಿಸುತ್ತಿದ್ದು, ಇದರಿಂದಾಗಿ ಈಗಾಗಲೇ ಸುಮಾರು 35 ಜೀವ ಬಲಿಯಾಗಿವೆ. ಇನ್ನು, ಈವೆಲ್ಲದರ ಮಧ್ಯೆ ಇರಾನ್ ಪ್ರತಿಭಟನಕಾರರಿಗೆ ಟ್ರಂಪ್ ಬೆಂಬಲ ಸೂಚಿಸಿದ್ದು, ಪ್ರತಿಭಟನಾಕಾರರನ್ನು ಹಿಸಾಂತ್ಮಕವಾಗಿ ಕೊಲ್ಲುವುದನ್ನು ಮುಂದುವರೆಸಿದರೆ ಯುಎಸ್ ಮಧ್ಯಪ್ರವೇಶಿಸುತ್ತದೆ ಎಂದು ಬೆದರಿಕೆಯಾಗಿದ್ದು, ಇರಾನ್ ಪರಿಸ್ಥಿತಿ ಸಹ ವೆನುಜುವೆಲಾದ ರೀತಿ ಆಗಲಿದೆಯಾ ಎಂಬ ಪ್ರಶ್ನೆಗಳು ಮೂಡಿದೆ.
ಇರಾನ್ ಆರ್ಥಿಕತೆ ಕುಸಿತಗೊಂಡಿದ್ದು, ಇರಾನಿಗರು ಬೀದಿಗಿಳಿದು ಖಮೇನಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ವಾಧಿಕಾರಿಗೆ ಸಾವಾಗಲಿ ಹಾಗೂ ಖಮೇನಿ ನಾಶವಾಗಲಿ ಎಂದು ಘೋಷಣೆಗಳನ್ನು ಕೂಗುತ್ತಾ, ಇಡೀ ಇರಾನ್ ರಾಷ್ಟ್ರದಾದ್ಯಂತ ಸುಮಾರು 25 ಪ್ರ್ಯಾಂತ್ಯಗಳಲ್ಲಿ 250ಕ್ಕೂ ಹೆಚ್ಚು ಸ್ಥಳಗಳಲ್ಲಿ ಸತತ 12 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗಳಲ್ಲಿ ಈವರೆಗೂ ಸುಅಮರು 35 ಮಂದಿ ಬಲಿಯಾದರೆ ಬರೋಬ್ಬರಿ 1200ಕ್ಕೂ ಹೆಚ್ಚು ಪ್ರತಿಭಟನಕಾರರ ಬಂಧನವಾಗಿದೆ.
ಇರಾನ್ ತನ್ನ ಮನೆಯಲ್ಲಿನ ಗುಟ್ಟು ರಟ್ಟಾಗದಂತೆ ಕ್ರಮವಹಿಸುತ್ತಿದ್ದರೂ ಸಹ ಪ್ರಸ್ತುತ, ಇರಾನ್ ನಾಯಕತ್ವವು ಕುಸಿಯುತ್ತಿರುವ ಆರ್ಥಿಕತೆ, ಕೋಪಗೊಂಡ ಜನಸಮೂಹ, ಮತ್ತು ವಿದೇಶಿ ಮಿಲಿಟರಿ ಕ್ರಮಕ್ಕೆ ಆಹ್ವಾನ ನೀಡುವ ಅಪಾಯದ ನಡುವೆ ಸಿಲುಕಿಕೊಂಡಿದೆ. ನಾಯಕರಲ್ಲಿನ ಭಿನ್ನತೆ ಹಾಗೂ ಜರ ಆಕ್ರೋಶದ ನಡುವೆ ಇಸ್ಲಾಮಿಕ್ ರಿಪಬ್ಲಿಕ್ ಇತ್ತೀಚಿನ ವರ್ಷಗಳಲ್ಲಿ ಎದುರಿಸಿದ ಅತ್ಯಂತ ಮಹತ್ವದ ಕ್ಷಣಗಳಲ್ಲಿ ಒಂದಾಗಿದ್ದು, ಇರಾನ್ ಪರಿಸ್ಥಿತಿ ವೆನುಜುವೆಲಾದಂತೆ ಆಗುವ ಸಾಧ್ಯತೆ ಕಮ್ಮಿ ಇದೆ ಆದರೂ ಸದ್ಯದ ಪರಿಸ್ಥಿತಿಯಲ್ಲಿ ಅವಕಾಶಗಳನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ವಿಶ್ಲೇಷಕರು.
ಇದನ್ನೂ ಓದಿ : ಮಲೆಯಾಳಿ ಭಾಷಾ ಮಸೂದೆ, ಕಾಸರಗೋಡಿನ ಕನ್ನಡಿಗರಿಗೆ ವಂಚನೆ: ಕೇರಳ ನಡೆಗೆ ಸಿದ್ದು ಖಂಡನೆ