ಇಸ್ಲಾಮಾಬಾದ್ : ಭಾರತ ಹಾಗೂ ಪಾಕ್ ನಡುವಿನ ಉದ್ವಿಗ್ನ ವಾತಾವರಣ ಇನ್ನಷ್ಟು ಹದಗೆಡುವ ಸಾಧ್ಯತೆಯಿದ್ದು, ಈ ಹಿನ್ನಲೆ ಪಾಕಿಸ್ತಾನ್ ಸೂಪರ್ ಲೀಗ್ ಕೂಟವನ್ನು ಬೇರೆ ದೇಶಕ್ಕೆ ಸ್ಥಳಾಂತರಿಸಲಾಗಿದೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕ್ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ಉಗ್ರರ ಅಡಗುತಾಣ, ಪಟ್ಟಣ, ಕ್ರಿಕೆಟ್ ಸ್ಟೇಡಿಯಂ, ಬಂದರುಗಳನ್ನು ಭಾರತ ಹೊಡೆದುರುಳಿಸಿದೆ. ಇದರಿಂದ ಭಯಗೊಂಡ ಪಾಕ್ ತನ್ನ ಪಿಎಸ್ ಎಲ್ ಕೂಟವನ್ನು ಬೇರೆ ದೇಶಕ್ಕೆ ನಡೆಸಲು ತೀರ್ಮಾನಿಸಿದೆ.
ರಾವಲ್ಪಿಂಡಿ ಕ್ರಿಕೆಟ್ ಮೈದಾನದ ಮೇಲೆ ಭಾರತ ದಾಳಿ ನಡೆಸಿದ ಬಳಿಕ ರಾವಲ್ಪಿಂಡಿ, ಮುಲ್ತಾನ್, ಲಾಹೋರ್ ನಲ್ಲಿ ನಡೆಯಬೇಕಿದ್ದ ಕೊನೆಯ ಎಂಟು ಪಂದ್ಯಗಳನ್ನು ಯುಎಇ ನಲ್ಲಿ ನಡೆಸುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತಿಳಿಸಿದ್ದು, ಪಂದ್ಯಗಳ ವೇಳಾಪಟ್ಟಿ ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಪ್ರತಿಕ್ರಿಯಿಸಿದ್ದು, ಪಾಕ್ ನಲ್ಲಿ ಇತ್ತೀಚೆಗೆ ನಡೆದ ದಾಳಿಯಲ್ಲಿ ರಾವಲ್ಪಿಂಡಿ ಕ್ರಿಕೆಟ್ ಮೈದಾನಕ್ಕೆ ಹಾನಿಯಾಗಿದೆ. ಇದರಿಂದ ಪಂದ್ಯಾಟ ಅಡ್ಡಿಯಾಗಿದೆ. ಈ ಹಿನ್ನಲೆ ಮುಂದಿನ ಪಂದ್ಯಾಟವನ್ನು ದುಬೈಗೆ ಸ್ಥಳಾಂತರಿಸಲಾಗಿದೆ ಎಂದರು.
ಟೂರ್ನಿಯಲ್ಲಿ ಭಾಗಿಯಾಗುವ ಎಲ್ಲಾ ಆಟಗಾರರ ಮಾನಸಿಕ ಯೋಗಕ್ಷೇಮವನ್ನು ನೋಡಿಕೊಳ್ಳುವುದು ನಮಗೆ ಮುಖ್ಯ.. ಹೀಗಾಗಿ ಮುಂದಿನ ಪಂದ್ಯಾಟವನ್ನು ದುಬೈಗೆ ಸ್ಥಳಾಂತರಿಸಲು ಮುಂದಾಗಿದ್ದೇವೆ ಎಂದು ಮೊಹ್ಸಿನ್ ನಖ್ವಿ ತಿಳಿಸಿದರು.