ತಿರುವನಂತಪುರ: ಕಾಂಗ್ರೆಸ್ (Congress) ನಾಯಕ ಶಶಿ ತರೂರ್ (Shashi Tharoor) ಪದೇ ಪದೇ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಸರ್ಕಾರದ (Centrag Govt) ಯೋಜನೆಗಳನ್ನು ಹೊಗಳಿ ಸ್ವಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಪ್ರಧಾನಿಯನ್ನು ಕೊಂಡಾಡಿದ್ದಾರೆ. ಅಷ್ಟೇ ಅಲ್ಲ ಕೋವಿಡ್ ವ್ಯಾಕ್ಸಿನ್ ಮೂಲಕ ಪ್ರಧಾನಿ ಮೋದಿ ಭಾರತವನ್ನು ವಿಶ್ವದ ಪ್ರಬಲ ನಾಯಕನಾಗಿ ಮಾತ್ರವಲ್ಲ, ಆರೋಗ್ಯ ಕಾಳಜಿ ಹಾಗೂ ರಾಜತಾಂತ್ರಿಕತೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ರು. ಇದೀಗ ಬಿಜೆಪಿಯನ್ನು ಮುಂದಿಟ್ಟುಕೊಂಡು ನೆಹರೂರನ್ನು ಟೀಕಿಸಿದ್ದಾರೆ.
‘ನಾನು ದೇಶದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರು ಅವರ ಅಭಿಮಾನಿ, ಅವರ ಬಗ್ಗೆ ಅಪಾರ ಗೌರವವಿದೆ. ಆದರೆ ಅವರ ಕೆಲವು ನೀತಿಗಳನ್ನು ಕಣ್ಣು ಮುಚ್ಚಿಕೊಂಡು ಬೆಂಬಲಿಸಲ್ಲ’ ಎಂದು ಹೇಳಿದ್ದಾರೆ.
ಕೇರಳ ವಿಧಾನಸಭೆಯ ಅಂತರರಾಷ್ಟ್ರೀಯ ಪುಸ್ತಕ ಉತ್ಸವದಲ್ಲಿ ಮಾತನಾಡಿದ ಶಶಿ ತರೂರ್, ಬಿಜೆಪಿ ಸರ್ಕಾರವು ನೆಹರೂ ಪರಂಪರೆಯನ್ನು ನಡೆಸಿಕೊಂಡ ರೀತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಾನು ಜವಾಹರ ಲಾಲ್ ನೆಹರು ಅವರ ಅಭಿಮಾನಿ, ಆದರೆ ಅವರ ಕೆಲ ನಿರ್ಧಾರಗಳನ್ನು ಟೀಕಿಸುತ್ತೇನೆ. ನಾನು ಅವರ ಮನಸ್ಸು ಮತ್ತು ದೃಷ್ಟಿಕೋನವನ್ನು ಮೆಚ್ಚುತ್ತೇನೆ. ಅವರ ಬಗ್ಗೆ ನನಗೆ ಗೌರವವಿದೆ, ಆದರೂ ನಾನು ಅವರ ಎಲ್ಲಾ ನೀತಿಗಳನ್ನು ನೂರಕ್ಕೆ ನೂರರಷ್ಟು ಬೆಂಬಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಜವಾಹರ್ ಲಾಲ್ ನೆಹರು ಮಾಡಿದ ಹಲವು ಕೆಲಸಗಳು ಮೆಚ್ಚುಗೆಗೆ ಅರ್ಹವಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದವರು ನೆಹರು. ಆದರೆ, ಅವರು (ಮೋದಿ ಸರ್ಕಾರ) ಪ್ರಜಾಪ್ರಭುತ್ವ ವಿರೋಧಿ ಎಂದು ನಾನು ಹೇಳುವುದಿಲ್ಲ. ಆದರೆ ಮೋದಿಯವರು ನೆಹರೂ ವಿರೋಧಿ. ನೆಹರುರನ್ನು ಅಗತ್ಯಕ್ಕೆ ತಕ್ಕಂತೆ ಬಲಿಪಶು ಮಾಡಲಾಗುತ್ತಿದೆ ಎಂದು ತರೂರ್ ಹೇಳಿದರು.
ಇದನ್ನೂ ಓದಿ: 19 ಮಸೂದೆಗಳಿಗೆ ಒಪ್ಪಿಗೆ, ದ್ವೇಷ ಭಾಷಣ ತಡೆ ವಿಧೇಯಕಕ್ಕೆ ಬೀಳದ ಗವರ್ನರ್ ಸಹಿ!
1962 ರ ಭಾರತ-ಚೀನಾ ಯುದ್ಧವನ್ನು ನೆನೆದ ತರೂರ್, ಕೆಲವು ಸಂದರ್ಭಗಳಲ್ಲಿ, ಮೋದಿ ಸರ್ಕಾರದ ಟೀಕೆಗೆ ಒಂದು ಅರ್ಥ ಇರಬಹುದು, ಉದಾಹರಣೆಗೆ, 1962 ರ ಚೀನಾ ವಿರುದ್ಧದ ಸೋಲಿಗೆ ನೆಹರೂರವರ ಕೆಲವು ನಿರ್ಧಾರಗಳು ಕಾರಣವೆಂದು ಹೇಳಬಹುದು ಎಂದು ತರೂರ್ ಹೇಳಿದ್ರು.
ಸಣ್ಣ ಸಣ್ಣ ತಪ್ಪುಗಳನ್ನು ಹಿಡಿದುಕೊಂಡು ಬಿಜೆಪಿಯವರು ನೆಹರುರರನ್ನು ದೂಷಣೆ ಮಾಡುವುದು ಸರಿಯಲ್ಲ. ದೇಶದ ಎಲ್ಲಾ ಸಮಸ್ಯೆಗಳಿಗೆ ಅವರನ್ನು ಮಾತ್ರ ದೂಷಿಸುವುದು ಅನ್ಯಾಯ. ಈಗ ಪ್ರತಿಯೊಂದು ಸಮಸ್ಯೆಗೂ ನೆಹರೂ ಅವರನ್ನು ಟೀಕಿಸಲಾಗುತ್ತಿದೆ ಎಂದು ಶಶಿ ತರೂರ್ ವಾಗ್ದಾಳಿ ನಡೆಸಿದ್ದಾರೆ.
ಆರ್ಎಸ್ಎಸ್ ಹೊಗಳಿದ್ದ ದಿಗ್ವಿಜಯ್ ಸಿಂಗ್ಗೆ ಬೆಂಬಲ: ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದೊಳಗಿನ (RSS) ಸಂಘಟನೆ ಬಗ್ಗೆ ಹೊಗಳಿ, ಪಕ್ಷದೊಳಗೆ ಸುಧಾರಣೆಗಳನ್ನು ತರಬೇಕು ಎಂದು ಹೇಳಿದ್ದ ರಾಜ್ಯಸಭಾ ಸದಸ್ಯ, ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ನಡೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಬಲಿಸಿದ್ರು.
ನೆಲದ ಮೇಲೆ ಕುಳಿತುಕೊಳ್ಳುವ ತಳಣಟ್ಟದ ಕಾರ್ಯಕರ್ತರು ಸಂಘ ಪರಿವಾರ ಮತ್ತು ಬಿಜೆಪಿಯ ರಾಜಕೀಯ ಪರಿಸರದಲ್ಲಿ ಹೇಗೆ ಬೆಳೆದು ಮುಖ್ಯಮಂತ್ರಿ ಮತ್ತು ಪ್ರಧಾನಿ ಆಗಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನಿದರ್ಶನ. ಇದಕ್ಕೆ ಪೂರಕವಾಗಿ 1990ರ ದಶಕದಲ್ಲಿ ಗುಜರಾತಿನ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ನಾಯಕ ಎಲ್ಕೆ ಅಡ್ವಾಣಿ ಅವರ ಮುಂದೆ ನೆಲದ ಮೇಲೆ ಕುಳಿತಿದ್ದ ನರೇಂದ್ರ ಮೋದಿ ಫೋಟೊವನ್ನು ದಿಗ್ವಿಜಯ್ ಸಿಂಗ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.