Thursday, July 10, 2025
Home Blog

SIDDARAMAIAH: ಫ್ರೀ ಬಸ್​​​​​​​​​ನಿಂದ ಮಹಿಳೆಯರು ಸೋಮಾರಿಯಾಗಲ್ಲ, ಸಬಲರಾಗ್ತಾರೆ- ರಂಭಾಪುರಿ ಶ್ರೀ ಹೇಳಿಕೆಗೆ ಸಿಎಂ ಟಾಂಗ್

ನವದೆಹಲಿ: ರಂಭಾಪುರಿ ಮಠದ ಸ್ವಾಮೀಜಿಗಳು ಗ್ಯಾರಂಟಿ ಯೋಜನೆಗಳಿಂದಾಗಿ ಜನ ಸೋಮಾರಿಗಳಾಗಿದ್ದಾರೆ ಎಂದು ಯಾವ ಹಿನ್ನೆಲೆ ಅಥವಾ ಸಂದರ್ಭದಲ್ಲಿ ಈ ರೀತಿ ಹೇಳಿದ್ದಾರೆ ಎಂದು ನನಗೆ ತಿಳಿದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣುಮಕ್ಕಳು ಶಕ್ತಿ ಯೋಜನೆಯಡಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಿದರೆ ಸೋಮಾರಿಗಳಾಗುತ್ತಾರೆಯೇ? ಕರ್ನಾಟಕದಲ್ಲಿ 7 ಕೋಟಿ ಜನರಿದ್ದು ಅದರ ಅರ್ಧ ಭಾಗವಿರುವ 3.5 ಕೋಟಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣಿಸಿದರೆ ಹಣ ಉಳಿತಾಯವಾಗುತ್ತದೆ.

ಅವರ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ 2000 ರೂ.ಗಳನ್ನು ಒದಗಿಸಿದರೆ ಅವರು ಮಕ್ಕಳನ್ನು ಓದಿಸುತ್ತಾರೆ. ಇದರಿಂದ ಮಹಿಳೆಯರು ಸಬಲರಾಗುತ್ತಾರೆಯೇ ವಿನಃ ಸೋಮಾರಿ ಆಗಲು ಹೇಗೆ ಸಾಧ್ಯ ಎಂದು ರಂಭಾಪುರಿ ಶ್ರೀಗಳ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

‘ಅಸಮಾನತೆ ಹೋಗದಿದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗಲ್ಲ’

ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ದೊರೆತಿರುವ ಸ್ವಾತಂತ್ರ್ಯ ಸಾರ್ಥಕವಾಗಬೇಕಾದರೆ ಪ್ರತಿಯೊಬ್ಬರೂ ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು ಎಂದಿದ್ದರು. ಅವರು ಮೇಧಾವಿಗಳಾಗಿದ್ದು, ಅವರು ಹೇಳಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಜಾತಿ ಹೋಗಬೇಕಾದರೆ ಆರ್ಥಿಕವಾಗಿ ಸಬಲರಾಗಲು, ಸಮಾನತೆ ತರಲು ಸಾಮಾಜಿಕ – ಆರ್ಥಿಕ ಶಕ್ತಿ ದೊರಕಬೇಕು. ದೇಶ ಕಂಡ ಮೇಧಾವಿಗಳಲ್ಲೇ ಅಪ್ರತಿಮ ಮೇಧಾವಿಗಳಾದ ಅಂಬೇಡ್ಕರ್ ಅವರು ದೇಶದಲ್ಲಿನ ಅಸಮಾನತೆ ಹೋಗದಿದ್ದರೆ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ.

ಸಮಸಮಾಜದ ನಿರ್ಮಾಣಕ್ಕೆ ಜಾತೀಯತೆ, ವರ್ಗ ವ್ಯವಸ್ಥೆ ಹೋಗಬೇಕು ಎಂದಿದ್ದಾರೆ. ಗ್ಯಾರಂಟಿ ಯೋಜನೆಗಳು ಸಮಾಜದ ಬಡವರ ಪರಿಸ್ಥಿತಿಯನ್ನು ಉತ್ತಮಪಡಿಸಬಹುದು ಎಂದು ಸಾಕಷ್ಟು ಚರ್ಚೆ ಮಾಡಿ ನಂತರ ನಿರ್ಣಯ ಮಾಡಿದ್ದೇವೆ ಎಂದಿದ್ದಾರೆ.

BBMP: ಬೀದಿ ನಾಯಿಗಳಿಗೂ ಗ್ಯಾರಂಟಿ ಭಾಗ್ಯ- ಬಾಡೂಟಕ್ಕೆ 2.80 ಕೋಟಿ ರೂ. ಟೆಂಡರ್ ಕರೆದ ಬಿಬಿಎಂಪಿ

ಬೆಂಗಳೂರು: ಬೀದಿ ನಾಯಿಗಳ ಬಾಡೂಟಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (BBMP) 2.80 ಕೋಟಿ ರೂ. ಟೆಂಡರ್ ಕರೆದಿದೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಬೀದಿನಾಯಿಗಳಿಗೆ ಬೆಂಗಳೂರಿನಲ್ಲಿ ಬಾಡೂಟದ ಭಾಗ್ಯವನ್ನು ಕಾಂಗ್ರೆಸ್ ಸರ್ಕಾರ ಕಲ್ಪಿಸುತ್ತಿದೆ.

ಹೌದು.. ಬಿಬಿಎಂಪಿಯ 8 ವಲಯಗಳಲ್ಲಿ ಪ್ರತಿನಿತ್ಯ 600 ರಿಂದ 700 ಬೀದಿ ನಾಯಿಗಳಿಗೆ ಬಾಡೂಟ ನೀಡಲು ಬಿಬಿಎಂಪಿ ಈ ಟೆಂಡರ್ ಕರೆದಿದೆ. ಬೀದಿ ನಾಯಿಗಳಿಗೆ ಮಾಂಸ, ಚಿಕನ್, ಎಗ್‌ರೈಸ್ ನೀಡಲಾಗುತ್ತದೆ.

ಸದ್ಯ ಕಾಂಗ್ರೆಸ್ ಸರ್ಕಾರದ ಈ ಕ್ರಮಕ್ಕೆ ತೆರಿಗೆದಾರರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರ ಹೊಟ್ಟೆಗೆ ಹಿಟ್ಟಿಲ್ಲ ಆದರೆ ಬೀದಿನಾಯಿಗಳಿಗೆ ಬಾಡೂಟ ಕೊಡುತ್ತಿದ್ದಾರೆ. ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಈ ಐಡಿಯಾ ಮಾಡಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ.

YASH: ರಾಮಾಯಣ ಸಿನಿಮಾದಲ್ಲಿ 15 ನಿಮಿಷ ಮಾತ್ರ ಕಾಣಿಸಲಿದ್ದಾರಂತೆ ಯಶ್‌, ಏನಿದು ಹೊಸ ಸುದ್ದಿ?

ಬೆಂಗಳೂರು: ಬಹುನಿರೀಕ್ಷಿತ ರಾಮಾಯಣ (Ramayana) ಸಿನಿಮಾದ (Film) ಮೊದಲ ಭಾಗದ ಟೀಸರ್‌ ಇತ್ತೀಚಗೆಷ್ಟೇ ಬಿಡುಗಡೆಯಾಗಿ, ಅದ್ಭುತ ರೆಸ್ಪಾನ್ಸ್‌ ಪಡೆದುಕೊಂಡಿದೆ. ಇದೀಗ ಈ ಸಿನಿಮಾ ಸಂಬಂಧಿಸಿದಂತೆ ಹೊಸ ಅಪ್ಡೇಟ್‌ ಬಂದಿದ್ದು, ಯಶ್‌ (Yash) ಪಾತ್ರದ ಬಗ್ಗೆ ಗುಸುಗುಸು ಶುರುವಾಗಿದೆ.

 15 ನಿಮಿಷ ಮಾತ್ರ ತೆರೆಮೇಲೆ ಕಾಣಿಸೋದು
ಸದ್ಯದ ಮಾಹಿತಿಗಳ ಪ್ರಕಾರ ಯಶ್‌ ಈ ಸಿನಿಮಾದಲ್ಲಿ ಕೇವಲ 15 ನಿಮಿಷಗಳ ಕಾಲ ಮಾತ್ರ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ಕೇವಲ ಮೊದಲ ಭಾಗದಲ್ಲಿ, ಉಳಿದ ಭಾಗಗಳಲ್ಲಿ ಅವರು ಹೆಚ್ಚಾಗಿಯೇ ಕಾಣಿಸಿಕೊಳ್ಳಲಿದ್ದಾರೆ. ಈ ಮೊದಲು ಸಹ ಸಿನಿಮಾ ಬಗ್ಗೆ ಮಾತನಾಡಿದ ಯಶ್‌, ನಾನು ರಾವಣನ ಪಾತ್ರ ಬಿಟ್ಟು ಬೇರೆ ಪಾತ್ರವನ್ನ ಆಯ್ಕೆ ಮಾಡುತ್ತಿರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಅಲ್ಲದೇ, ಈ ಪಾತ್ರದ ಬಗ್ಗೆ ಅವರಿಗೆ ನಿರೀಕ್ಷೆ ಹಾಗೂ ಉತ್ಸಾಹ ಬಹಳಷ್ಟಿದೆ. ಆದರೆ ಮೊದಲ ಭಾಗದಲ್ಲಿ ಕೇವಲ 15 ನಿಮಿಷ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸುವ ಸುದ್ದಿಯಾಗಿದೆ.

ನಿರ್ಮಾಣ ಸಹ ಮಾಡುತ್ತಿರುವ ಯಶ್‌
ಇನ್ನೊಂದು ಮುಖ್ಯವಾದ ವಿಚಾರ ಎಂದರೆ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿರುವವರಲ್ಲಿ ಯಶ್‌ ಸಹ ಒಬ್ಬರು. ಆದರೂ ಸಹ ಅವರು ಸಿನಿಮಾಗೆ ಎಷ್ಟು ಬೇಕೋ ಅಷ್ಟೇ ನಿಮಿಷ ಕಾಣಿಸಿಕೊಳ್ಳುತ್ತಿದ್ದು, ಅದರ ಚಿತ್ರೀಕರಣ ಸಹ ಆಗಿದೆ. ಹಾಗೆಯೇ, ರಾಮಾಯಣ ಸಿನಿಮಾದ ಎರಡನೇ ಭಾಗದಲ್ಲಿ ಯಶ್‌ ಅವರ ಪಾತ್ರವೇ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಚಿತ್ರದ ತುಂಬಾ ಅವರೇ ಇರಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಯಶ್‌ ಅವರನ್ನ ರಾವಣನ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, 2026 ದೀಪಾವಳಿ ಸಮಯದಲ್ಲಿ ಮೊದಲ ಭಾಗ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

RASHMIKA MANDANNA : ಮತ್ತೆ ಒಂದಾದ ಸೂಪರ್ ಹಿಟ್ ಜೋಡಿ – ಅಲ್ಲು ಅರ್ಜುನ್ ಜೊತೆ ಮೈಬಳುಕಿಸಲಿದ್ದಾರೆ ನಟಿ ರಶ್ಮಿಕಾ

ತೆಲಂಗಾಣ : ಪುಷ್ಪ ಹಾಗೂ ಪುಷ್ಪ-2 ಸಿನಿಮಾಗಳ ಬಿಗ್ ಹಿಟ್ ಬಳಿಕ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದು, ಖ್ಯಾತ ನಿರ್ದೇಶಕ ಅಟ್ಲಿ ಜೊತೆಗೂಡಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇನ್ನು ಹೆಸರಿಡದ ಈ ಚಿತ್ರಕ್ಕೆ AA26-A6 ಎಂದು ಕರೆಯಲಾಗಿದ್ದು ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ಹಾಲಿವುಡ್ ನ ಸೂಪರ್ ಮ್ಯಾನ್ ಸಿನಿಮಾ ಮಾದರಿಯ ಭಾರತೀಯ ಸಿನಿಮಾ ಇದಾಗಿರಲಿದ್ದು,ಈ ಚಿತ್ರದ ಮೊದಲ ಗ್ಲಿಂಪ್ಸ್ ಈಗಾಗಲೇ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ.ಈ ಬೆನ್ನಲ್ಲೇ ಇದೀಗ ಚಿತ್ರತಂಡ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ.

ಹೌದು,
ಪುಷ್ಪ ಹಾಗೂ ಪುಷ್ಪ-2 ಸಿನಿಮಾಗಳಲ್ಲಿ ಅಲ್ಲು ಅರ್ಜುನ್ ಗೆ ಜೊತೆಯಾಗಿದ್ದ ನಟಿ ರಶ್ಮಿಕಾ ಮಂದಣ್ಣ,ಅಟ್ಲಿ ನಿರ್ದೇಶನದ ಈ ಸಿನಿಮಾದಲ್ಲೂ ಕೂಡ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ಚಿತ್ರತಂಡ ಕೂಡಿಕೊಳ್ಳಲ್ಲಿದ್ದಾರೆ ಎಂಬ ಬಿಗ್ ಅಪ್ಡೇಟ್ ಲಭ್ಯವಾಗಿದೆ.

ಆ ಮೂಲಕ ಈಗಾಗಲೇ ದೊಡ್ಡ ತಾರಾಗಣದಿಂದ ಸದ್ದು ಮಾಡುತ್ತಿರುವ ಈ ಟೀಂ ಗೆ ನಟಿ ರಶ್ಮಿಕಾ ಸೇರ್ಪಡೆಯಾಗಿದೆ. ಇನ್ನುಳಿದಂತೆ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಮೃಣಾಲ್ ಠಾಕೂರ್, ರಶ್ಮಿಕಾ ಹಾಗೂ ಜಾಹ್ನವಿ ಕಪೂರ್ ಸೇರಿದಂತೆ ಹಲವು ತಾರೆಯರನ್ನು ಒಟ್ಟಿಗೆ ತೆರೆಯ ಮೇಲೆ ನೋಡಬಹುದಾಗಿದೆ.

SHOCKING: ಶಾಲಾ ಪ್ರಿನ್ಸಿಪಾಲರನ್ನೇ ಇರಿದು ಕೊಂದ ವಿದ್ಯಾರ್ಥಿಗಳು..!- ಕಾರಣ ಇಷ್ಟೇ..

ಚಂಡೀಗಢ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ಶಾಕಿಂಗ್‌ ಎಂಬಂತೆ ಇದೀಗ ಪಿಯುಸಿ ವಿದ್ಯಾರ್ಥಿಗಳಿಬ್ಬರು ಶಾಲೆಯ ಪ್ರಾಂಶುಪಾಲರನ್ನೇ ಇರಿದು ಕೊಂದ ಆಘಾತಕಾರಿ ಘಟನೆ ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಜಗ್ಬೀರ್ ಸಿಂಗ್ ಪಾನು ಎಂದು ಗುರುತಿಸಲಾಗಿದೆ. ಇವರು ಹಿಸಾರ್ ಜಿಲ್ಲೆಯ ನರ್ನೌಂಡ್‌ನ ಬಸ್ ಬಾದ್‌ಶಾಪುರದ ಕರ್ತಾರ್ ಮೆಮೋರಿಯಲ್‌ ಶಾಲೆಯ ನಿರ್ದೇಶಕ ಮತ್ತು ಪ್ರಾಂಶುಪಾಲ.

ಜಗ್ಬೀರ್ ಅವರು ಶಾಲಾ ಆವರಣದಲ್ಲಿ ನಿಂತಿದ್ದಾಗ 12 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಶಾಲೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಜಗ್ಬೀರ್ ಗೆ ಹಲವು ಬಾರಿ ಇರಿದಿದ್ದಾರೆ. ಈ ವೇಳೆ ಶಾಲಾ ಸಿಬ್ಬಂದಿಯು ವಿದ್ಯಾರ್ಥಿಗಳನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ.

ಇತ್ತ ಗಂಭೀರ ಗಾಯಗೊಂಡಿರುವ ಜಗ್ಬೀರ್ ನನ್ನು ಶಾಲಾ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಿಸಾರ್‌ಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದರು. ಹೀಗಾಗಿ ಕರೆದುಕೊಂಡು ಹೋಗುತ್ತಿದ್ದಾಗ ಜಗ್ಬೀರ್‌ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ಕೊಲೆ ಯಾಕೆ..?: ವಿದ್ಯಾರ್ಥಿಗಳು ಕೂದಲು ಕತ್ತರಿಸಿಕೊಂಡು ಶಾಲೆಗೆ ಬರುವಂತೆ ಮತ್ತು ಶಿಸ್ತು ಕಾಪಾಡಿಕೊಳ್ಳುವಂತೆ ಪ್ರಾಂಶುಪಾಲರು ಕೇಳಿಕೊಂಡಿದ್ದರು. ಆದರೆ ವಿದ್ಯಾರ್ಥಿಗಳು ಕೂದಲು ಕತ್ತರಿಸಲಿಲ್ಲ ಹಾಗೂ ಶಾಲೆಯ ಶಿಸ್ತನ್ನು ಕೂಡ ಪಾಲಿಸಲಿಲ್ಲ. ಇದರಿಂದ ಸಿಟ್ಟುಗೊಂಡ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಎಳೆದಾಡಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಈ ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ಹನ್ಸಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಮಿತ್ ಯಶವರ್ಧನ್ ತಿಳಿಸಿದ್ದಾರೆ.

ಘಟನೆಯ ಬಳಿಕ ಪ್ರಾಂಶುಪಾಲರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಿಸಾರ್‌ಗೆ ಕಳುಹಿಸಲಾಗಿದೆ. ಪೊಲೀಸರು ಈ ವಿಷಯದ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ ಮತ್ತು ತನಿಖೆ ಮುಂದುವರೆದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

GOOD NEWS: ‘ಆಶಾ ಕಾರ್ಯಕರ್ತೆ’ಯರಿಗೆ ಸರ್ಕಾರ ಸಿಹಿಸುದ್ದಿ, ಗೌರವಧನ ಪಾವತಿಗೆ ಅನುದಾನ ಬಿಡುಗಡೆ

ಬೆಂಗಳೂರು: ರಾಜ್ಯದ ಆಶಾ ಕಾರ್ಯಕರ್ತೆಯರಿಗೆ 2025-26ನೇ ಸಾಲಿನ ಎರಡನೇ ತ್ರೈಮಾಸಿಕ ಕಂತಿನ ಗೌರವಧನವನ್ನು ಪಾವತಿಸಲು ಸರ್ಕಾರದ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಮೂಲಕ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಸಿಹಿಸುದ್ದಿಯನ್ನು ನೀಡಿದೆ.

ಆಶಾ ಕಾರ್ಯಕರ್ತೆಯರಿಗೆ 2025-26ನೇ ಸಾಲಿನ ಆಯವ್ಯಯದಲ್ಲಿ 2 ಕೋಟಿ 71 ಲಕ್ಷ ಅನುದಾನವನ್ನು ನಿಗದಿಪಡಿಸಲಾಗಿದ್ದು, ಮೊದಲನೇ ತ್ರೈಮಾಸಿಕ ಗೌರವಧನ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದೆ. 41000 ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ 5000ದಂತೆ ಒಟ್ಟು 24 ಲಕ್ಷಗಳ ಅನುದಾನ ನಿಗದಿಪಡಿಸಲಾಗಿದೆ.

ಪುಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ, 2025-26ನೇ ಸಾಲಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಪಾವತಿಸಲು ಲೆಕ್ಕಶೀರ್ಷಿಕೆ ಎರಡನೇ ತ್ರೈಮಾಸಿಕ ಅಂದ್ರೆ ಜುಲೈನಿಂದ ಸೆಪ್ಟೆಂಬರ್​ವರೆಗಿನ 6 ಕೋಟಿಗೂ ಹೆಚ್ಚು ಮೊತ್ತ ಬಿಡುಗಡೆ ಮಾಡಲಾಗಿದೆ.

ಸರ್ಕಾರವು ಬಿಡುಗಡೆ ಮಾಡಿರುವ ಅನುದಾನವನ್ನು ಯಾವ ಉದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳುವ ಷರತ್ತು ಹಾಕಲಾಗಿದ್ದು, ನ್ಯಾಯಸಮ್ಮತವಾಗಿ ಬಳಸಿಕೊಂಡಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸತಕ್ಕದ್ದು ಎಂದು ತಿಳಿಸಲಾಗಿದೆ.

DARSHAN: ತುಳಸಿ ಗಿಡಕ್ಕೆ ನೀರು ಹಾಕಿದ ದರ್ಶನ್‌, ಹೊಸ ಅವತಾರದಲ್ಲಿ ಚಾಲೆಂಜಿಂಗ್‌ ಸ್ಟಾರ್

ಬೆಂಗಳೂರು: ನಟ ದರ್ಶನ (Actor Darshan) ಇತ್ತೀಚಿನ ದಿನಗಳಲ್ಲಿ ದೇವಸ್ಥಾನ (Temple), ದೇವರಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಹೀಗೆ ಧಾರ್ಮಿಕ ಜಾಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ದೇವರ ಮೇಲಿನ ಭಕ್ತಿ ಹೆಚ್ಚಾಗಿದೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ. ಇದೀಗ ಅವರು ತುಳಸಿಗೆ (Tulsi) ನಮಸ್ಕಾರ ಮಾಡಿರುವ ಫೋಟೋ ವೈರಲ್‌ (Photo Viral) ಆಗುತ್ತಿದ್ದು, ಅಭಿಮಾನಿಗಳಲ್ಲಿ ಅದು ಅಚ್ಚರಿ ಮೂಡಿಸಿದೆ.

ತುಳಸಿ ಗಿಡಕ್ಕೆ ನೀರು ಹಾಕಿದ ದರ್ಶನ
ನಟ ದರ್ಶನ್‌ ಅವರ ವಿಭಿನ್ನವಾದ ಫೋಟೋ ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದ್ದು, ದರ್ಶನ್ ಇಂದು ಮನೆಯ ಮುಂದಿರುವ ತುಳಸಿ ಗಿಡಕ್ಕೆ ನೀರು ಹಾಕಿ ನಮಸ್ಕಾರ ಮಾಡಿದ್ದಾರೆ. ಮಹಿಳೆಯರೇ ಹೆಚ್ಚಾಗಿ ಪೂಜೆ ಮಾಡುವ ತುಳಸಿಗೆ ದರ್ಶನ್‌ ನೀರು ಹಾಕಿ ಕೈ ಮುಗಿದಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ತಮ್ಮ ಆರ್‌ಆರ್‌ ನಗರ ಮನೆಯ ಮುಂದಿರುವ ತುಳಸಿ ಗಿಡಕ್ಕೆ ಕೋರ್ಟ್‌ಗೆ ಹೋಗುವ ಮೊದಲು ದರ್ಶನ್‌ ನೀರು ಹಾಕಿದ್ದಾರೆ. ಇನ್ನು ಕೋರ್ಟ್‌ ಹೋಗುವ ಮೊದಲು ದರ್ಶನ್‌ ಅಭಿಮಾನಿಗಳನ್ನ ಸಹ ಭೇಟಿ ಮಾಡಿದ್ದಾರೆ.

ಡೆವಿಲ್‌ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ
ರೇಣುಕಾಸ್ವಾಮಿ ಪ್ರಕರಣದ ನಂತರ ದರ್ಶನ್‌ ಬಹಳ ಬದಲಾಗಿದ್ದಾರೆ. ಅವರ ಮೃದು ಸ್ವಾಭಾವ ಕಾಣಿಸುತ್ತಿದೆ. ಜೈಲಿನಿಂದ ಹೊರಬಂದಮೇಲೆ ಸ್ವಲ್ಪ ದಿನ ಬೆನ್ನು ನೋವಿಗೆ ಚಿಕಿತ್ಸೆ ಪಡೆದು ಮತ್ತೆ ಶೂಟಿಂಗ್‌ಗೆ ಹಾಜರಾಗಿದ್ದು, ಬಹಳ ಬೇಗ ಸಿನಿಮಾ ಮುಗಿಸುವ ಗುರಿ ಇಟ್ಟುಕೊಂಡಿದ್ದಾರೆ. ಇನ್ನು ಪ್ರಕರಣ ದಾಖಲಾಗಿದ್ದ ಕಾರಣದಿಂದ ಶೂಟಿಂಗ್‌ ಮಾಡಲು ವಿದೇಶಕ್ಕೆ ಹೋಗಲು ಕೋರ್ಟ್‌ ಅನುಮತಿ ಕೊಟ್ಟಿರಲಿಲ್ಲ, ಆದರೆ ಇದೀಗ ಅದಕ್ಕೂ ಸಹ ಅನುಮತಿ ಸಿಕ್ಕಿದ್ದು, ಬಹಳ ಮೇಲೆ ದರ್ಶನ ತೆರೆಮೇಲೆ ಕಾಣಿಸಲಿದ್ದಾರೆ ಎನ್ನಬಹುದು.

CONGRESS: ‘ಸರ್, ಪ್ಲೀಸ್ ದೆಹಲಿಯಲ್ಲಿ ಏನೇನಾಯ್ತು ಹೇಳಿ’.. ಸಿದ್ದು ಗುಡುಗಿದ ಬೆನ್ನಲ್ಲೇ ಖರ್ಗೆ ಬಳಿ ಸಚಿವರ ಪಟ್ಟು

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ದಿನೇ ದಿನೇ ಹೆಚ್ಚಾಗುತ್ತಿರುವ ನಡುವೆ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದಿದ್ದಾರೆ. ಟಗರು ಗುಟುರು ಬೆನ್ನಲ್ಲೇ ಸಿದ್ದು ಆಪ್ತೇಷ್ಟರು ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಪ್ರತ್ಯೇಕ ಸಭೆ ನಡೆಸಿದ್ದಾರೆ.

ಖರ್ಗೆ ನಿವಾಸಕ್ಕೆ ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಮಹದೇವಪ್ಪ, ಸತೀಶ್ ಜಾರಕಿಹೊಳಿ ಹೋಗಿದ್ರು. ಗೃಹ ಸಚಿವ ಜಿ ಪರಮೇಶ್ವರ್​ರನ್ನೂ ಕರೆಸಿಕೊಂಡಿದ್ರು. ಎಲ್ಲರೂ ಸೇರಿ ‘ಸರ್, ಡೆಲ್ಲಿಯಲ್ಲಿ ಏನಾಗಿದೆ? ದಯವಿಟ್ಟು ಹೇಳಿ’ ಎಂದು ಮಲ್ಲಿಕಾರ್ಜುನ ಖರ್ಗೆಗೆ ದುಂಬಾಲು ಬಿದ್ದಿದ್ದಾರೆ.

ಜಪ್ಪಯ್ಯ ಅಂದ್ರೂ ಬಾಯಿ ಬಿಡದ ಖರ್ಗೆ..!
ಸಿದ್ದರಾಮಯ್ಯ ಆಪ್ತ ಸಚಿವರು ಏನೇ ಸರ್ಕಸ್ ಮಾಡಿದರೂ, ಎಷ್ಟೇ ಕೇಳಿದರೂ ಖರ್ಗೆ ಮಾತ್ರ ಬಾಯಿ ಬಿಡಲಿಲ್ವಂತೆ. ಇಬ್ಬರ ಮಧ್ಯೆ ನಡೆದ ಚರ್ಚೆ ಬಗ್ಗೆ ಏನೂ ಹೇಳಲ್ಲ ಎಂದು ಹೇಳಿ ಕಳಿಸಿದ್ದಾರಂತೆ.

ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಸಚಿವರು ಮೌನರಾಗಿದ್ದು, ಸಹಜ ಭೇಟಿ ಅಂತ ಹೇಳಿ‌ ಬಹುತೇಕ ಸಚಿವರು ಹೊರಟು ಹೋಗಿದ್ದಾರೆ. ನಾಯಕತ್ವದ ಬಗ್ಗೆ ಯಾವುದೇ ಹೇಳಿಕೆ‌ ‌ನೀಡದಂತೆ ಖರ್ಗೆ ತಾಕೀತು ಮಾಡಿದ್ದಾರೆ ಎಂದು ಹೇಳಲಾಗಿದೆ. ಖರ್ಗೆ ಭೇಟಿಗೆ ಬಂದಿದ್ದವರು ಬಹುತೇಕ ಸಿಎಂ ಆಪ್ತ ಸಚಿವರೇ ಆಗಿರುವುದು ವಿಶೇಷ.

ಪ್ರತ್ಯೇಕ ಸಭೆ ನಡೆಸಿದ ದಲಿತ ಸಚಿವರು..
ಇದಾದ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಹೆಚ್.ಸಿ ಮಹಾದೇವಪ್ಪ ರಹಸ್ಯ ಸಮಾಲೋಚನೆ ನಡೆಸಿದ್ದಾರೆ. ಶಿವಾನಂದ ವೃತ್ತದಲ್ಲಿರುವ ಸಚಿವ ಹೆಚ್‌.ಸಿ ಮಹಾದೇವಪ್ಪ ನಿವಾಸದಲ್ಲಿ ಪರಸ್ಪರ ಚರ್ಚೆ ನಡೆಸಿದ್ದಾರೆ. ಸಚಿವ ಮಹಾದೇವಪ್ಪ ನಿವಾಸಕ್ಕೆ ತೆರಳಿ ಸುಮಾರು 25 ನಿಮಿಷಗಳ ಕಾಲ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದಾರೆ. ಇದಾದ ಬಳಿಕ ಉಭಯ ನಾಯಕರು ಒಂದೇ ಕಾರಿನಲ್ಲಿ ತೆರಳಿದ್ದಾರೆ.

Evening Snacks: ಕಾರ್ನ್ ಪಕೋಡ ಈ ರೀತಿ ಮಾಡಿದರೆ ಕಾಫಿ ಟೀ ಜೊತೆ ಸೂಪರ್ ಕಾಂಬಿನೇಷನ್; ಇಲ್ಲಿದೆ ರೆಸಿಪಿ

ಕ್ರಿಸ್ಸಿ ಕ್ರಿಸ್ತಿಯಾಗಿ ಹಕೋಡಾ ತಿನ್ನಬೇಕು ಎನಿಸಿದರೆ ಸಾಮಾನ್ಯವಾಗಿ ಈರುಳ್ಳಿ ಪಕೋಡ ಥಟನೇ ನೆನಪಿಗೆ ಬರುತ್ತದೆ. ಆದರೆ ಈರುಳ್ಳಿ ಪಕೋಡಾಗಿಂತ ಕ್ರಿಸ್ತಿಯಾಗಿ ಬೇರೆ ರೀತಿ ಪಕೋಡಾ ಮಾಡಬೇಕು ಅಂದುಕೊಂಡಿದ್ದರೆ, ಗರಿಗರಿಯಾದ ಕಾರ್ನ್ ಪಕೋಡಾ ಮಾಡಿ… ಇದರ ರುಚಿ ಬೇರೆ ಪಕೋಡಾಗಳಿಗಿಂತ ಸಖತ್ ಟೇಸ್ಟಿಯಾಗಿರುತ್ತದೆ, ಸಂಜೆ ಟೈಂನಲ್ಲಂತೂ ಕಾರ್ನ್ ಪಕೋಡ ಪರ್ಫೆಕ್ಟ್‌ ಸ್ನಾಕ್ಸ್ ಆಗಿರುತ್ತದೆ.

ಅದರಲ್ಲೂ ಮಕ್ಕಳಿಗೆ ಯಾವಾಗಲೂ ಹೊರಗಡೆ ತಿಂಡಿ ಕೊಡುವುದು ಆರೋಗ್ಯಕ್ಕೆ ಒಳ್ಳೆಯದು ಅಲ್ಲ ಹಾಗಾಗಿ ಮನೆಯಲ್ಲಿ ಈಸಿಯಾಗಿ ಕಾರ್ನ್ ಪಕೋಡ ಮಾಡಿ ಕೊಡಬಹುದು. ಮನೆಯಲ್ಲಿಯೇ ಪಕೋಡ ಮಾಡಿಕೊಟ್ಟರೆ ರುಚಿನ್ನು ಚೆನ್ನಾಗಿರುತ್ತದೆ.. ಜೊತೆಗೆ ಹೆಲ್ತಿ ತಿಂಡಿ ಮನೆಯಲ್ಲೇ ಸವಿದಂತೆ ಆಗುತ್ತದೆ. ಮಕ್ಕಳಿಗೆ ಅಷ್ಟೇ ಅಲ್ಲಾ ದೊಡ್ಡವರಿಗೂ ಈ ಸ್ನಾಕ್ಸ್ ಇಷ್ಟವಾಗುತ್ತದೆ ಕಡಿಮೆ ಪದಾರ್ಥಗಳಲ್ಲಿ ತುಂಬಾ ಬೇಗನೆ ಅಂದುಕೊಂಡ ತಕ್ಷಣ ಮಾಡುವಂತಹ ರೆಸಿಪಿ ಇದಾಗಿದೆ ತುಂಬಾ ಸಿಂಪಲ್ ಆಗಿ ಕಾರ್ನ್ ಪಕೋಡ ಮಾಡುವುದು ಹೇಗೆಂದು ನೋಡೋಣ.

ಬೇಕಾಗುವ ಸಾಮಾಗ್ರಿಗಳು

ಜೋಳ
ಕಡಲೆ ಹಿಟ್ಟು
ಈರುಳ್ಳಿ
ಹಸಿರು ಮೆಣಸಿನಕಾಯಿ
ಶುಂಠಿ
ಕೆಂಪು ಮೆಣಸಿನ ಪುಡಿ
ಅರಿಶಿನ ಪುಡಿ
ಗರಂ ಮಸಾಲೆ ಪುಡಿ
ಹಿಂಗ್
ಕರಿಮೆಣಸಿನ ಪುಡಿ
ಜೀರಿಗೆ ಪುಡಿ
ಉಪ್ಪು
ನೀರು
ಚಾಟ್ ಮಸಾಲಾ
ಎಣ್ಣೆ

ಮಾಡುವ ವಿಧಾನ:

* ಮೊದಲಿಗೆ ಜೋಳವನ್ನು ತೆಗೆದುಕೊಂಡು ಬೇಯಿಸಿಕೊಂಡು ಜೋಳದ ಕಾಳುಗಳನ್ನು ಬಿಡಿಸಿಕೊಳ್ಳಬೇಕು.

* ಬಳಿಕ ಒಂದು ಬಟ್ಟಲ್ ತೆಗೆದುಕೊಂಡು ಸಣ್ಣಗೆ ಹೆಚ್ಚಿದ ಈರುಳ್ಳಿ, ಶುಂಠಿ, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಗರಂ ಮಸಾಲೆ ಪುಡಿ, ಹಿಂಗ್, ಕರಿಮೆಣಸಿನ ಪುಡಿ, ಜೀರಿಗೆ ಪುಡಿ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು.

* ಈಗ ಕಡಲೆ ಹಿಟ್ಟು ಹಾಗೂ ನೀರು ಸೇರಿಸಿ ಮಿಶ್ರಣ ಮಾಡಿ. ಬೇಯಿಸಿದ ಜೋಳ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

* ಆಮೇಲೆ ಬಾಣಲೆ ಇಟ್ಟು ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ತಯಾರಿಸಿಟ್ಟ ಹಿಟ್ಟಿನಿಂದ ಪಕೋಡಾ ರೀತಿಯಲ್ಲಿ ಸ್ವಲ್ಪ ಸ್ವಲ್ಪವೇ ಬಿಡಿ.
ಪಕೋಡಾಗಳು ಎರಡೂ ಬದಿ ಗೋಲ್ಡನ್ ಬ್ರೌನ್ ಬಣ್ಣ ಬರುವಂತೆ ಹಾಗೂ ಗರಿಗರಿಯಾಗುವವರೆಗೆ ಚೆನ್ನಾಗಿ ಕಾಯಿಸಿ.

* ಪಕೋಡಾಗಳು ಗೋಲ್ಡನ್ ಬಣ್ಣಕ್ಕೆ ಬಂದ ಮೇಲೆ ಎಣ್ಣೆಯಿಂದ ತೆಗೆದು ಚಾಟ್ ಮಸಾಲಾ ಉದುರಿಸಿದ್ದರೆ ಗರಿಗರಿಯಾದ ಜೋಳದ ಪಕೋಡಾ ಸವಿಯಲು ಸಿದ್ಧವಾಗುತ್ತದೆ.

MUDUBIDRE: ಹಿಂದೂ ಮುಖಂಡನ ಫೋನ್‌ನಲ್ಲಿ ಅಶ್ಲೀಲ ವಿಡಿಯೋ ಕೇಸ್‌, ತನಿಖೆ ಸ್ಪೀಡ್ ಜಾಸ್ತಿ ಮಾಡಿದ ಪೊಲೀಸರು

ಬೆಂಗಳೂರು: ಕರಾವಳಿಯಲ್ಲಿ (Karavali) ಸದ್ಯ ಹಿಂದೂ ಮುಖಂಡನ (Hindu Leader) ಫೋನಿನಲ್ಲಿ ಪತ್ತೆಯಾದ ಅಶ್ಲೀಲ ವಿಡಿಯೋ ಪ್ರಕರಣದ್ದೇ ಸುದ್ದಿ ಎಲ್ಲೆಡೆ ವೈರಲ್‌ ಆಗುತ್ತಿದೆ. ಮುಖಂಡನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳ (Video) ಜೊತೆಗೆ ಗಂಡು-ಹೆಣ್ಣಿನ ನಗ್ನ ಫೋಟೋಗಳು (Photo) ಸಹ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು (Police) ತನಿಖೆ ಚುರುಕು ಮಾಡಿದ್ದಾರೆ.

 ವಿಡಿಯೋ ನೋಡಿ ಪೊಲೀಸರಿಗೆ ಶಾಕ್‌
ಇನ್ನು ತನಿಖೆ ಮಾಡುತ್ತಿರುವ ಮೂಡಬಿದಿರೆ ಪೊಲೀಸರಿಗೇ ಮುಖಂಡನ ಮೊಬೈಲ್‌ನಲ್ಲಿರುವ ಫೋಟೋಗಳನ್ನ ಹಾಗೂ ವಿಡಿಯೋಗಳನ್ನ ನೋಡಿ ಶಾಕ್‌ ಆಗಿದ್ದು, ತನಿಖೆಯ ಸ್ಪೀಡ್‌ ಅನ್ನು ಹೆಚ್ಚು ಮಾಡಿದ್ದಾರೆ. ಮೊಬೈಲ್‌ನಲ್ಲಿರುವ ಡೇಟಾಗಳನ್ನ ಪಡೆದುಕೊಳ್ಳಲು ಪೊಲೀಸರು ಕೋರ್ಟ್‌ ಹಾಗೂ ಮೇಲಾಧಿಕಾರಿಗಳ ಅನುಮತಿ ಕೇಳಿದ್ದರು. ಅನುಮತಿ ಸಿಕ್ಕ ನಂತರ ಡೇಟಾಗಳನ್ನ ಪಡೆದುಕೊಳ್ಳುತ್ತಿರುವಾಗ ಸುಮಾರು 50ಕ್ಕೂ ವಿಡಿಯೋಗಳು ಲಭ್ಯವಾಗಿದ್ದು, ಅದರಲ್ಲಿ ದೊಡ್ಡ ರಾಜಕಾರಣಿ ಒಬ್ಬರ ವಿಡಿಯೋ ಸಹ ಇದೆ ಎನ್ನಲಾಗುತ್ತಿದೆ. ಸದ್ಯ ಈ ವಿಡಿಯೋಗಳು ಅಸಲಿಯೋ ನಕಲಿಯೋ ಎಂಬುದನ್ನ ಪತ್ತೆಹಚ್ಚಲು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವೇ ಹೆಚ್ಚಿನ ಮಾಹಿತಿ ತಿಳಿಯಲಿದೆ.

ಏನಿದು ಪ್ರಕರಣ?
ಹಿಂದೂ ಮುಖಂಡ ಸಮಿತ್​ ರಾಜ್ ಎನ್ನುವವರನ್ನ ಖಾಸಗಿ ಬಸ್ ಗೆ ಕಲ್ಲು ತೂರಿದ್ದ ಪ್ರಕರಣದಲ್ಲಿ ಮೂಡಬಿದಿರೆ ಪೊಲೀಸರು ಬಂಧಿಸಿದ್ದರು. ಈ ಸಮಯದಲ್ಲಿ ಹೆಚ್ಚಿನ ತನಿಖೆ ಮಾಡುವ ನಿಟ್ಟಿನಲ್ಲಿ ಸಮಿತ್‌ ರಾಜ್‌ ಫೋನ್‌ ವಶಕ್ಕೆ ಪಡೆದುಕೊಂಡಿದ್ದರು. ಈ ಸಮಯದಲ್ಲಿ ಡೇಟಾ ಚೆಕ್‌ ಮಾಡಿದ್ದಾಗ ಅನೇಕ ಅಶ್ಲೀಲ ವಿಡಿಯೋಗಳು ಲಭ್ಯವಾಗಿದೆ. ಈ ವಿಡಿಯೋ ವಿಚಾರವಾಗಿ ಪ್ರತ್ತೇಕ ಪ್ರಕರಣವನ್ನ ದಾಖಲು ಮಾಡಲಾಗಿದ್ದು, ವಿಡಿಯೋ ಯಾರದ್ದು, ಈ ವಿಡಿಯೋ ಮಾಡಿದವರು ಯಾರೂ ಹಾಗೂ ಎಲ್ಲಿ ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ.

While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!