ಚುನಾವಣೆ ಸಮೀಪಿಸುತ್ತಿದ್ದಂತೆ ಕೋಮು ವಿಭಜಕ ರಾಜಕಾರಣಗಳು ಹೆಚ್ಚುತ್ತಿರುವ ನಡುವೆಯೇ ಬೆಳಗಾವಿಯಲ್ಲಿ ಭಾವೈಕ್ಯತೆಯನ್ನು ಎತ್ತಿಹಿಡಿಯುವಂತಹ ಘಟನೆ ವರದಿಯಾಗಿದೆ. ಅಂತ್ಯಸಂಸ್ಕಾರಕ್ಕೆ ಯಾರೂ ಮುಂದೆ ಬರದ ಕುಷ್ಟರೋಗಿಯ ಮೃತದೇಹಕ್ಕೆ ಮುಸ್ಲಿಮರು ಹೆಗಲು ಕೊಟ್ಟು, ಅಂತ್ಯ ಸಂಸ್ಕಾರ ನಡೆಸಿ ಮಾನವೀಯತೆ ಎತ್ತಿ ಹಿಡಿದಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದಕವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮುದಕವಿ ಗ್ರಾಮದ ನಿವಾಸಿಯಾಗಿರುವ ವಾಸಪ್ಪ ಕಂಬಾರ ಎಂಬವರು ಕುಷ್ಟರೋಗದಿಂದ ಬಳಲುತ್ತಿದ್ದು, ಅವರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆ ಗ್ರಾಮದ ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ನಂತರ ಸಹಾಯಕ್ಕೆ ಬಂದ ಸ್ಥಳೀಯ ಮುಸ್ಲಿಮರು ಶವ ಸಂಸ್ಕಾರಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿ, ಹಿಂದೂ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ.
ಈ ಹಿಂದೆ, ಕರೋನಾ ಭೀತಿಯಲ್ಲಿ ಶವಸಂಸ್ಕಾರಕ್ಕೆ ಕುಟುಂಬಸ್ಥರೇ ಹಿಂಜರಿಯುತ್ತಿದ್ದಾಗ, ಮುಸ್ಲಿಂ ಸಂಘಟನೆಗಳು ಜಾತಿ-ಮತ ನೋಡದೆ ಮೃತರ ಅಂತ್ಯಸಂಸ್ಕಾರಗಳನ್ನು ಅವರ ಸಂಪ್ರದಾಯದಂತೆ ನೆರವೇರಿಸಿ ಮಾನವೀಯತೆ ಮೆರೆದಿದ್ದವು.