ಮಂಗಳೂರು: ಲಂಚ ಅನ್ನೋದು ಆಧುನಿಕ ಭಾರತದಲ್ಲಿ ದೊಡ್ಡ ಸಮಸ್ಯೆಯಾಗಿದ್ದು, ನಿಯಂತ್ರಿಸುವುದೇ ಕಷ್ಟವಾಗುತ್ತಿದೆ. ಅದರಲ್ಲೂ, ಸರ್ಕಾರಿ ಕಚೇರಿಗಳಲ್ಲಿ ಲಂಚ ತಿನ್ನುವ ಅಧಿಕಾರಿಗಳು ಪದೇ ಪದೇ ಲಾಕ್ ಆಗಿ ಸುದ್ದಿಯಾಗುತ್ತಿದ್ದಾರೆ. ಅದೇ ರೀತಿ ಇದೀಗ ಸಂಚಾರ ಠಾಣೆಯ ಹೆಡ್ ಕಾನ್ಸ್ಟೆಬಲ್ 5000 ರೂಪಾಯಿ ಲಂಚ ಪಡೆಯಲು ಮುಂದಾಗಿ ಲೋಕಾಯುಕ್ತ ಅಧಿಕಾರಿಗಳ ಬಲೆಯಲ್ಲಿ ಲಾಕ್ ಆಗಿದ್ದಾರೆ. ಕದ್ರಿಯ ಪೂರ್ವ ಸಂಚಾರ ಠಾಣೆಯ ಹೆಡ್ ಕಾನ್ಸ್ಟೆಬಲ್ ತಸ್ಲಿಂ ಹೀಗೆ ಲಂಚ ಪಡೆಯುವಾಗ ಸಿಕ್ಕಿಬಿದ್ದವರು.
ನಂತೂರು ವೃತ್ತದಲ್ಲಿ ಕಾರು & ಸ್ಕೂಟರ್ ನಡುವೆ ಕೆಲ ದಿನಗಳ ಹಿಂದಷ್ಟೇ ಆಕ್ಸಿಡೆಂಟ್ ಆಗಿತ್ತು. ಈ ಕುರಿತು ಕದ್ರಿ ಸಂಚಾರ ಪೂರ್ವ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಕಾರಿನ ಡಾಕ್ಯುಮೆಂಟ್ ಪೊಲೀಸ್ ಠಾಣೆಗೆ ತಂದು ಕೊಡಲು ಆರೋಪಿ ತಸ್ಲಿಂ ಹೇಳಿದ್ದರಂತೆ. ಅದೇ ಕಾರಣಕ್ಕೆ ಕಾರಿನ ಮಾಲೀಕರು ದಾಖಲಾತಿ ತಂದು ಕೊಟ್ಟಿದ್ದರು. ಹೀಗಿದ್ದರೂ ಮತ್ತೆ ಲಂಚ ನೀಡುವಂತೆ ಆರೋಪಿ ಹೆಡ್ಕಾನ್ಸ್ಟೇಬಲ್ ಪದೇ ಪದೇ ಬೇಡಿಕೆ ಇಟ್ಟ ಕಾರಣಕ್ಕೆ ಕಾರಿನ ಮಾಲೀಕರು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಆರೋಪ ಮಾಡಲಾಗಿದೆ.
₹5000 ಲಂಚ ಪಡೆಯುವಾಗ ದಾಳಿ
ಹೀಗೆ ದೂರು ನೀಡಿದ್ದ ಹಿನ್ನೆಲೆ ಕದ್ರಿ ಸಂಚಾರ ಠಾಣೆ ಸಿಬ್ಬಂದಿ ತಸ್ಲಿಂ ಹಾಗೂ ವಿನೋದ್ ವಿರುದ್ಧ ಪ್ರಕರಣ ಕೂಡ ದಾಖಲು ಮಾಡಲಾಗಿತ್ತು. ಹೀಗಿದ್ದಾಗ ಆರೋಪಿ ತಸ್ಲಿಂ ಕಾರಿನ ಮಾಲೀಕರಿಂದ ಗುರುವಾರ ₹5 ಸಾವಿರ ಲಂಚ ಪಡೆಯುವ ಸಮಯದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದು,ಲಾಕ್ ಆಗಿದ್ದಾರೆ. ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಪೊಲೀಸ್ ಠಾಣೆಯ ಡಿವೈಎಸ್ಪಿ ಗಾನ ಪಿ ಕುಮಾರ್, ಸುರೇಶ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ಭಾರತಿ & ಕೆ.ಎನ್. ಚಂದ್ರಶೇಖರ್ ಅವರು ಈ ಕಾರ್ಯಾಚರಣೆ ಭಾಗವಾಗಿದ್ದರು.