ಬೆಂಗಳೂರು: ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ (Krishi Thapanda) ಅವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ನಿರ್ಮಾಪಕ ಹಾಗೂ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ (Arvind Venkatesh Reddy) ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ಸಂಬಂಧ ಮೊದಲ ಬಾರಿಗೆ ನಟಿ ಮೌನ ಮುರಿದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬಗ್ಗೆ ಕೀಳಾಗಿ ಮಾತನಾಡುತ್ತಿರುವುದು ತಾಳಲಾಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಕೃಷಿ ತಾಪಂಡ, ಕಳೆದ ಕೆಲವು ದಿನಗಳು ನನಗೆ ತುಂಬಾ ಭಾರವಾಗಿದ್ದವು. ನನ್ನ ವೈಯಕ್ತಿಕ ವಿಷಯ ಈಗ ಸಾರ್ವಜನಿಕವಾಗಿದೆ. ಪೊಲೀಸರ, ಕಾನೂನು, ಮಾಧ್ಯಮ ಮತ್ತು ಅನೇಕ ಜನರ ಬೆಂಬಲ ಸಿಕ್ಕಿದ್ದಕ್ಕೆ ನಾನು ಕೃತಜ್ಞೆ. ಆದರೆ ಕೆಲವರು ಇನ್ನೂ ದುಃಖ ಕೊಡೋ ರೀತಿಯಲ್ಲಿ, ಅರ್ಥವಿಲ್ಲದಂತೆ ಮಾತನಾಡುತ್ತಿದ್ದಾರೆ.
ಎಲ್ಲರೂ ನನ್ನನ್ನು ನಂಬಲೇಬೇಕು ಅಥವಾ ಬೆಂಬಲಿಸಲೇಬೇಕು ಅನ್ನೋ ನಿರೀಕ್ಷೆ ನನಗಿಲ್ಲ. ಆದ್ರೆ ಯಾರನ್ನಾದರೂ ಕೆಡವೋ, ಕೀಳು ಮಾತಾಡೋ ಹಕ್ಕು ಯಾರಿಗೂ ಇಲ್ಲ. ಸೋಶಿಯಲ್ ಮೀಡಿಯಾದ ದ್ವೇಷ-ಬುಲ್ಲಿಯಿಂಗ್ ಎಲ್ಲರೂ ತಾಳಲು ಸಾಧ್ಯವಾಗುವುದಿಲ್ಲ. ನನ್ನ ಸುರಕ್ಷತೆ, ನನ್ನ ಮನಶಾಂತಿ ಮತ್ತು ನನ್ನ ಬದುಕಿಗಾಗಿ ನಾನು ಮಾಡಬೇಕಾದುದನ್ನೇ ಮಾಡಿದ್ದೇನೆ. ನನ್ನ ಸತ್ಯದ ಮೇಲೆ ನಾನು ದೃಢವಾಗಿದ್ದೇನೆ. ನನ್ನ ಜೊತೆ ನಿಂತ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದು ಕೃಷಿ ಬರೆದಿದ್ದಾರೆ.
ಪ್ರಕರಣ ಏನು?
ನಟಿ ಕೃಷಿ ತಾಪಂಡ ಅವರಿಗೆ ಕಿರುಕುಳ ನೀಡಿದ್ದ ಆರೋಪ ಪ್ರಕರಣದಲ್ಲಿ ನಿನ್ನೆ ಶನಿವಾರ ಬೆಳಗ್ಗೆ ಅರವಿಂದ್ ರೆಡ್ಡಿಯನ್ನು ಪೊಲೀಸರು ಬಂಧನ ಮಾಡಿದ್ದರು. ನಂತರ ಆರೋಪಿಯನ್ನು ವಿಚಾರಣೆ ಮಾಡಿ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ನಂತರ 46ನೇ ಎಸಿಎಂಎಂ ಕೋರ್ಟ್ ಅವರಿಗೆ ಜಾಮೀನು ನೀಡಿದೆ.
ಕನ್ನಡದ 9 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕೃಷಿ 44 ವರ್ಷದ ವೆಂಕಟೇಶ್ ರೆಡ್ಡಿ ಮೇಲೆ ಕಿರುಕುಳದ ಆರೋಪ ಮಾಡಿದ್ದರು. 2021ರಲ್ಲಿ ಅರವಿಂದ್ಗೂ ನಟಿಗೂ ಪರಿಚಯ ಬೆಳೆದಿತ್ತು. 2022ರಲ್ಲಿ ಶ್ರೀಲಂಕಾದಲ್ಲಿ ನಡೆದ ‘ಲಾರ್ಸ್ ಕ್ರಿಕೆಟ್ ಕಪ್ ಉದ್ಘಾಟನೆಗೆ ಬರುವಂತೆ ಅರವಿಂದ್ ನಟಿ ಬಳಿ ಕೇಳಿದ್ದ ಅಂತೆಯೇ ನಟಿ ತೆರಳಿದ್ದರು. ಅಲ್ಲಿಂದ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಅಲ್ಲಿಂದ ಪ್ರೀತಿ-ಕಾಳಜಿಯಿಂದ ಅರವಿಂದ್ ನಡೆದುಕೊಳ್ಳುತ್ತಿದ್ದರಂತೆ.
ಈ ಬಗ್ಗೆ ಹೇಳಿಕೆ ನೀಡಿರುವ ರೆಡ್ಡಿ, ನಂತರ ನಮ್ಮಿಬ್ಬರ ನಡುವೆ ಲಿವ್ ಇನ್ ರಿಲೇಷನ್ಷಿಪ್ ಇತ್ತು. ಆದರೂ ಆಕೆ ತನ್ನ ಬಾಯ್ಫ್ರೆಂಡ್ ಜೊತೆ ತಾಂಜೇನಿಯಾಗೆ ಟ್ರಿಪ್ ಹೋಗಿದ್ದರು. ಇದಕ್ಕೆ ನಾನು ಪ್ರಶ್ನೆ ಮಾಡಿದಾಗ ನಮ್ಮಿಬ್ಬರ ಸಂಬಂಧ ಮುರಿದು ಬಿತ್ತು. ಅದಾದ ಬಳಿಕ ನಾನು 2024ರಲ್ಲಿ ಅವರ ಫೋಟೋವನ್ನು ಅಶ್ಲೀಲವಾಗಿ ಪೋಸ್ಟ್ ಮಾಡಿದ್ದೇನೆ ಅಂತಾ ಆರೋಪ ಮಾಡಿದ್ದರು. ಅವರ ಫ್ಯಾನ್ಸ್ ಕ್ಲಬ್ ಹಾಕಿದ್ದ ಫೋಟೋವನ್ನೇ ನಾನು ಇನ್ಸ್ಟಾದಲ್ಲಿ ಹಾಕಿದ್ದೆ. ಅದರಲ್ಲಿ ತಪ್ಪೇನೂ ಇರಲಿಲ್ಲ.ಈಗ ನಾನು ಅವರಿಗೆ ಪೋನ್ ಮಾಡಿ ತೊಂದರೆ ಕೊಡ್ತಿದ್ದೇನೆ ಅಂತಾ ಆರೋಪ ಮಾಡಿದ್ದಾರೆ.
ಆಕೆ ನನ್ನ ಪಾರ್ಟ್ನರ್ ಆಗಿದ್ದಾಕೆ ಕೇಳಿದ್ದೆಲ್ಲವನ್ನೂ ಮಾಡಿದ್ದೇನೆ. ಆಕೆಯ ಹೆಸರಲ್ಲಿ ಕಸ್ಟಮೈಸ್ಡ್ ಪೋರ್ಶೆ ಕಾರು ಗಿಫ್ಟ್ ಮಾಡಿದ್ದೆ. 2024ರ ಜೂನ್ ವೇಳೆ ಮದುವೆ ಆಗಬೇಕು ಅಂದುಕೊಂಡಿದ್ದೆವು. ಆದರೆ ಆಗಲಿಲ್ಲ. ಐ ವಿಲ್ ಕಂ ಬ್ಯಾಕ್ ಅಂತ ಹೋದವಳು ಮತ್ತೆ ಬಂದಿಲ್ಲ ಎಂದು ಅರವಿಂದ್ ರೆಡ್ಡಿ ಹೇಳಿದ್ದಾರೆ.