ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗುಂಪು ಘರ್ಷಣೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿ ಒಟ್ಟು 20 ಜನರ ಬಂಧನವಾಗಿದೆ.
ಹುಬ್ಬಳ್ಳಿಯ ಮಂಟೂರ ರಸ್ತೆಯ ಅರಳಿಕಟ್ಟಿ ಓಣಿಯಲ್ಲಿ ಬುಧವಾರ ಎರಡು ಗುಂಪು ಘರ್ಷಣೆ ನಡೆದಿದೆ. ಗಂಗಾಧರನಗರದ ನಿವಾಸಿ ಸುರೇಶ್ ಸಂಗಣ್ಣವರ ಎಂಬುವವರು ಅನಾರೋಗ್ಯದಿಂದ ಮೃತಪಟ್ಟ ಬಳಿಕ ಅವರ ಅಂತ್ಯಕ್ರಿಯೆ ಮಾಡಲು ಮಂಟೂರ ರಸ್ತೆಯ ಸ್ಮಶಾನಕ್ಕೆ ನಿವಾಸಿಗಳು ಹೋಗಿದ್ದರು. ಅಲ್ಲಿ ವೈಯಕ್ತಿಕ ದ್ವೇಷ, ವೈಮನಸ್ಸಿನಿಂದ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ.
ವಿಚಾರ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಗಲಾಟೆಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಆದರೆ ಆಕ್ರೋಶಿತ ಗುಂಪು ಪೊಲೀಸರ ಮೇಲೆಯೇ ಹಲ್ಲೆ ಮಾಡಿದೆ. ಈ ಬಗ್ಗೆ ಶಹರ್ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ಸೇರಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಇದೀಗ ಬಂಧನವಾಗಿರುವ 20 ಜನರ ಪೈಕಿ ಐವರು ರೌಡಿಶೀಟರ್ ಗಳಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರೌಡಿಶೀಟರ್ಗಳ ಮೇಲೆ ಗೂಂಡಾ ಕಾಯ್ದೆ ಅಡಿಯಲ್ಲಿ ಗಡಿಪಾರು ಮಾಡುವ ಕ್ರಮ ಕೈಗೊಳ್ಳಲಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಒಬ್ಬ ಮಾರಕಾಸ್ತ್ರ ಹಿಡಿದು ಓಡಾಡಿರುವುದು ಕಂಡುಬಂದಿದೆ. ಆತ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ.