ಬಾಗಲಕೋಟೆ : ರಾಜ್ಯದಲ್ಲಿ ನಾಲ್ಕು ಮಂದಿ ಮುಖ್ಯಮಂತ್ರಿಗಳಾಗಿದ್ದೇ ನನ್ನಿಂದ ಎಂದು ಗಾಲಿ ಜನಾರ್ಧನ ರೆಡ್ಡಿ ಘೋಷಿಸಿದ್ದಾರೆ. ಬೀಳಗಿ ಕ್ಷೇತ್ರದ ಕಲಾದಗಿ ಗ್ರಾಮದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತಾಡಿದ ಜನಾರ್ಧನ ರೆಡ್ಡಿ, ಅಷ್ಟೇ ಅಲ್ಲದೇ 45 ಜನ ನನ್ನಿಂದಲೇ ಶಾಸಕರಾಗಿದ್ದಾರೆ. ಈ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ನುಡಿದಿದ್ದಾರೆ.
ಇದೇ ವೇಳೆ ಯಡಿಯೂರಪ್ಪ ಬಗ್ಗೆ ಪ್ರಸ್ತಾಪಿಸಿದ ಜನಾರ್ಧನ ರೆಡ್ಡಿ, ಯಡಿಯೂರಪ್ಪ ಒಳ್ಳೆಯ ವ್ಯಕ್ತಿ. ಪಕ್ಷದ ಸಂಘಟನೆಗಾಗಿ ಅವರು ಸಾಕಷ್ಟು ದುಡಿದಿದ್ದಾರೆ. ನಮ್ಮದು ಬೇರೆ ಪಕ್ಷವಾಗಿದ್ದರೂ ಅವರ ಬಗ್ಗೆ ಅಭಿಮಾನವಿದೆ. ಯಡಿಯೂರಪ್ಪನವರಂಥ ಮತ್ತೊಬ್ಬ ನಾಯಕರು ರಾಜ್ಯದಲ್ಲಿ ಮತ್ತೊಬ್ಬರು ಹುಟ್ಟಿಬರಲು ಸಾಧ್ಯವಿಲ್ಲ ಎಂದರು.
ಯಡಿಯೂರಪ್ಪನವರಿಗೆ ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಿದರು. ಅದರ ಕರ್ಮವನ್ನು ಪಕ್ಷದವರು ಅನುಭವಿಸುತ್ತಾರೆ ಎಂದ ಜನಾರ್ಧನ ರೆಡ್ಡಿ, ನಿಮ್ಮೂರಿನ ಶಾಸಕರೊಬ್ಬರು ದೆಹಲಿಗೆ ಹೋಗಿ ಮುಖ್ಯಮಂತ್ರಿಯಾಗುವ ಹುನ್ನಾರ ನಡೆಸಿದ್ದರು ಎಂದು ನಿರಾಣಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು. ಜೊತೆಗೆ ಯಾವ ಕಾರಣಕ್ಕೂ ಸಕ್ಕರೆ ಕಾರ್ಖಾನೆಯ ಮಾಲಿಕರನ್ನು ಬೆಂಬಲಿಸಬೇಡಿ ಎಂದ ಜನಾರ್ಧನ ರೆಡ್ಡಿ, ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪಕ್ಷ ಬದ್ದವಾಗಿದೆ ಎಂದು ನುಡಿದಿದ್ದಾರೆ.