ಚಿಕ್ಕಮಗಳೂರು: ತಂದೆಯ ಸಾವಾದರೂ ಮಗಳಿಗೆ ಈ ವಿಚಾರ ತಿಳಿಯದಂತೆ ಮುಚ್ಚಿಟ್ಟು ಸೂತಕದ ನಡುವೆಯೇ ಕುಟುಂಬಸ್ಥರು ಮದುವೆಯನ್ನು ನೆರವೇರಿಸಿರುವಂತಹ ಹೃದಯ ವಿದ್ರಾವಕ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
45 ವರ್ಷದ ಚಂದ್ರು ಅವರು ತಮ್ಮ ಮಗಳ ಮದುವೆ ಹಿನ್ನೆಲೆ ಹಿಂದಿನ ದಿನ ಉತ್ಸಾಹದಿಂದ ಓಡಾಡಿಕೊಂಡಿದ್ದರು. ನಿನ್ನೆ ಬೆಳಗ್ಗೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಆಮಂತ್ರಣ ಪತ್ರಿಕೆಯನ್ನು ಕೊಡಲು ಹೋದಾಗ ಅಲ್ಲಿ ಭೀಕರ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ.
ಆದರೆ ತಂದೆ ಸಾವನ್ನಪ್ಪಿದ್ದಾರೆ ಎಂದು ಮಗಳು ತಿಳಿದರೆ, ಎಲ್ಲಿ ಮದುವೆಯನ್ನು ನಿಲ್ಲಿಸುತ್ತಾಳೊ ಎಂಬ ಭಯದಿಂದ ಕುಟುಂಬ್ಥರು ಈ ವಿಚಾರವನ್ನು ಮುಚ್ಚಿಟ್ಟು ಮದುವೆ ಮಾಡಿಸಿದ್ದಾರೆ. ಅಪ್ಪ ಎಲ್ಲಿ ಎಂದು ಕೇಳಿದರೆ, ಅವರಿಗೆ ಮದುವೆಗೆ ಓಡಾಡಿ ಸುಸ್ತಾಗಿದೆ, ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿ ವಿವಾಹವನ್ನು ನೆರವೇರಿಸಿದ್ದಾರೆ.
ಆರತಕ್ಷತೆ ಹಾಗೂ ವಿವಾಹ ಕಾರ್ಯಕ್ರಮಗಳೆಲ್ಲವೂ ಮುಗಿದ ಬಳಿಕ ತಂದೆ ಸಾವನ್ನಪ್ಪಿರುವ ವಿಚಾರವನ್ನು ತಾಯಿ ಮಗಳಿಗೆ ತಿಳಿಸಿದ್ದಾರೆ. ಸಂತಸದ ವಾತಾವರಣವಿರಬೇಕಿದ್ದ ಮದುವೆ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.