ಬೆಂಗಳೂರು: ಅಪಾರ್ಟ್ಮೆಂಟ್ ಒಂದರಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ 100 ಕಿಲೋಗ್ರಾಂ ಗಾಂಜಾ ಪತ್ತೆಯಾದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕರ್ಪೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಆನೇಕಲ್ ಠಾಣೆ ಪೊಲೀಸರು ಕೇರಳ ಮೂಲದ ಸಚಿನ್ನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಇತರ ಆರೋಪಿಗಳಾದ ರಾಶಿ, ಸಂಜು ಮತ್ತು ಉಮೇದ್ ಪರಾರಿಯಾಗಿದ್ದಾರೆ. ಸಚಿನ್ ಕೂಡ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಪಾರ್ಟ್ಮೆಂಟ್ನ ಮೊದಲ ಮಹಡಿಯಿಂದ ಹಾರಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಕಾಲು ಮುರಿದು ಗಾಯಗೊಂಡಿದ್ದರಿಂದ ಸಿಕ್ಕಿಬಿದ್ದಿದ್ದಾನೆ. ಗಾಯಾಳು ಸಚಿನ್ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಾರ್ಟ್ಮೆಂಟ್ನಲ್ಲಿ ಆನೇಕಲ್ ಠಾಣೆ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಮತ್ತು ಆನೇಕಲ್ ಉಪವಿಭಾಗದ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತನಿಖೆಯ ವೇಳೆ ಆರೋಪಿಗಳು ಹೊರರಾಜ್ಯಗಳಿಂದ ಗಾಂಜಾವನ್ನು ತರಿಸಿ, ಅಪಾರ್ಟ್ಮೆಂಟ್ನಲ್ಲಿ ಸಣ್ಣ ಸಣ್ಣ ಪ್ಯಾಕೆಟ್ಗಳಾಗಿ ಪ್ಯಾಕ್ ಮಾಡುತ್ತಿದ್ದರು. ಈ ಪ್ಯಾಕೆಟ್ಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು. ಆರೋಪಿಗಳ ಕೊಠಡಿಯಲ್ಲಿ ವೇಯಿಂಗ್ ಸ್ಕೇಲ್, ಪ್ಯಾಕಿಂಗ್ ಟೇಪ್, ಮತ್ತು ರಾಶಿಯಾಗಿ ಗಾಂಜಾ ಪಾಕೆಟ್ಗಳು ಪತ್ತೆಯಾಗಿವೆ.