ಮುಂದಿನ ಸಿಎಂ ನಾನೇ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿಯಲ್ಲಿ ಮುಂದಿನ ಬಾರಿ ಲಿಂಗಾಯತರಿಗೆ ಸಿಎಂ ಸ್ಥಾನವಿಲ್ಲ ಎಂಬ ಚರ್ಚೆಗಳ ನಡುವೆ ಸಿಎಂ ಬೊಮ್ಮಾಯಿ ಅವರು ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.
ಬಾಗಲಕೋಟೆಯ ಮುಧೋಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಮುರುಗೇಶ್ ನಿರಾಣಿಯನ್ನು ಕಾಲೆಳೆಯುವ ರೀತಿಯಲ್ಲಿ ʼನಾನೇ ಮುಂದಿನ ಮುಖ್ಯಮಂತ್ರಿʼ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
“ಬೀಳಗಿ ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ಸಾವಿರಾರು ಅಭಿವೃದ್ಧಿ ಕಾರ್ಯಗಳಾಗಿವೆ. ಆದರೆ, ಮುರುಗೇಶ್ ನಿರಾಣಿ ನನ್ನನ್ನೇ ಅಲ್ಲಿಗೆ ಕರೆದುಕೊಂಡು ಹೋಗಿಲ್ಲ. ನನ್ನನ್ನು ಕರೆದುಕೊಂಡು ಹೋದರೆ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ನನಗೆ ಗೊತ್ತಾಗಬಹುದು ಎಂದು ಅವರು ಕರೆದೊಯ್ದಿಲ್ಲ. ಚಿಂತೆ ಮಾಡಬೇಡಿ, ನಾನೇ ಮತ್ತೆ ಮುಖ್ಯಮಂತ್ರಿಯಾಗಿ ಅಲ್ಲಿಗೆ ಬರುತ್ತೇನೆ” ಎಂದು ಬೊಮ್ಮಾಯಿ ಹೇಳಿದ್ದಾರೆ.