ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಆಟೋ ಚಾಲಕರ ಜೊತೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂವಾದ ನಡೆಸಿದ್ರು.. ಆಟೋ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳೇನು? ಅದಕ್ಕೆ ಪರಿಹಾರಗಳೇನು? ಇಂಥ ಹಲವಾರು ವಿಚಾರಗಳು ಇಂದಿನ ಸಂವಾದದಲ್ಲಿ ಚರ್ಚೆಯಾದವು.
ಕಾರ್ಯಕ್ರಮದಲ್ಲಿ ಆಟೋ ಚಾಲಕರು ದಿರಿಸನ್ನೇ ಧರಿಸಿ, ಆಟೋ ಚಾಲನೆ ಮಾಡುವ ಮುಖಾಂತರ ಡಿ.ಕೆ.ಶಿ ಕಾರ್ಯಕ್ರಮ ಉದ್ಘಾಟಿಸಿ ಸಂವಾದದಲ್ಲಿ ಪಾಲ್ಗೊಂಡ್ರು. ಆ ಮೂಲಕ ಚಾಲಕರ ಜೊತೆ ಕಾಂಗ್ರೆಸ್ ನಿಲ್ಲಲಿದೆ ಎಂಬ ಸಂದೇಶ ಸಾರಿದ್ರು..
ಪ್ರಮುಖವಾಗಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಏರಿಗೆಯಿಂದ ಬೇಸತ್ತಿರುವ ಆಟೋ ಚಾಲಕರು ತಮ್ಮ ಅಳಲನ್ನು ತೋಡಿಕೊಂಡ್ರು..
ಈ ವೇಳೆ ಆಟೋ ಚಾಲಕರನ್ನುದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ನೀವು ಸ್ವಾಭಿಮಾನದ ಬದುಕು ನಡೆಸುತ್ತಿದ್ದೀರಿ. ನೀವು ದೇಶ ಹಾಗೂ ಜನ ಸೇವಕರು. ಮಧ್ಯಮವರ್ಗ ಹಾಗೂ ಜನ ಸಾಮಾನ್ಯರ ಸಾರಥಿಗಳು. ಇಡೀ ಪ್ರಪಂಚದಲ್ಲಿ ಈ ವರ್ಗಕ್ಕೆ ಜಾತಿ, ಧರ್ಮದ ಬೇಧವಿಲ್ಲ ಎಂದ್ರು.
ಬೆಲೆ ಏರಿಕೆ ಕುರಿತು ಮಾತನಾಡಿ ನೀವು ದಿನ ನಿತ್ಯ ಗ್ಯಾಸ್, ಡೀಸೆಲ್ ಮೂಲಕ ಗಾಡಿ ಚಾಲನೆ ಮಾಡುತ್ತಿದ್ದು, ಬೆಲೆ ಏರಿಕೆಯಿಂದ ಸರ್ಕಾರ ನಿಮ್ಮ ಜೇಬನ್ನು ದಿನನಿತ್ಯ ಪಿಕ್ ಪಾಕೆಟ್ ಮಾಡುತ್ತಿದೆ. ಕೋವಿಡ್ ಸಮಯದಲ್ಲಿ ನಾವು ಚಾಲಕರಿಗೆ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಗ್ರಹ ಮಾಡಿದೆವು. ಪ್ರತಿ ತಿಂಗಳು10 ಸಾವಿರ ರೂ. ಪರಿಹಾರ ನೀಡುವಂತೆ ಕೇಳಿದೆವು. ಆದರೆ ಈ ಸರ್ಕಾರ 5 ಸಾವಿರ ಘೋಷಣೆ ಮಾಡಿ, ಒಂದು ತಿಂಗಳೂ ಅದನ್ನು ಸರಿಯಾಗಿ ನೀಡಲಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ರು.
ಇದೇ ಹೊತ್ತಲ್ಲಿ ಮತ ಬೇಟೆಗಿಳಿದ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಮುಂದೆ ನಿಮ್ಮ ಕಾಂಗ್ರೆಸ್ ಸರ್ಕಾರ ಬರಲಿದೆ. ನಿಮ್ಮ ಹೋರಾಟದ ದಿಕ್ಕು ಮೇ ತಿಂಗಳಲ್ಲಿ ರಾಜ್ಯದಲ್ಲಿ ಬದಲಾವಣೆ ತರುವತ್ತ ಇರಬೇಕು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಆಟೋಗಳ ಮೇಲೆ ಹಾಕಿಕೊಂಡು ಪ್ರಚಾರ ಮಾಡುತ್ತಿರುವವರಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಆಟೋ ಚಾಲಕರ ಸಮಸ್ಯೆ ಬಗೆಹರಿಯಲಿದೆ. ನಾನು ನಮ್ಮ ಪಕ್ಷದ ನಾಯಕರೆಲ್ಲರೂ ನಿಮ್ಮ ಜತೆ ಇರುತ್ತೇವೆ ಎಂದ್ರು